ಹಳೇಬೀಡು: ~ರೈತರು ತಾವು ಬೆಳೆದ ಉತ್ಪನ್ನಗಳನ್ನು ಕೂಡಲೇ ಮಾರಾಟ ಮಾಡುವ ಬದಲು ಸ್ವಲ್ಪ ಕಾಲ ಸಂಗ್ರಹಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಬೇಕು~ ಎಂದು ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಹಾಸನ ಆಕಾಶವಾಣಿ ಕೇಂದ್ರ ಮಂಗಳವಾರ ಪುಷ್ಪಗಿರಿ ಮಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ~ಆಹಾರ ಆರಂಭ~ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಕಟಾವು ಮಾಡಿದ ಕೂಡಲೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯುವುದರಿಂದ ಬೆಲೆ ಕಡಿಮೆಯಾಗಿ ಮಧ್ಯವರ್ತಿಗಳು ದುಡ್ಡು ಮಾಡುತ್ತಾರೆ. ಸ್ವಲ್ಪ ತಾಳ್ಮೆ ವಹಿಸಿದರೆ ವ್ಯಾಪಾರಿಗಳೇ ರೈತರ ಬಳಿಗೆ ಬಂದು ಹೆಚ್ಚು ದುಡ್ಡಿಕೊಟ್ಟು ಖರೀದಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ. ದೇಶದಲ್ಲಿ ಆಹಾರದ ಕೊರತೆ ಇಲ್ಲ. ಆದರೂ ರೈತರು ವಾಣಿಜ್ಯ ಬೆಳೆಗಳತ್ತ ವಾಲಿದ್ದರಿಂದ ಆಹಾರದ ಅಭಾವ ಉಂಟಾಗುತ್ತಿದೆ. ಬೆಲೆ ಏರಿಕೆಗೆ ಇದೇ ಕಾರಣ ಎಂದು ಅವರು ಹೇಳಿದರು.
ಹಾಸನ ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ವಿಲ್ಫ್ರೆಡ್ ರೂಬಾನ್ ಹಾಲಿನಲ್ಲಿ ಲಭ್ಯವಿರುವ ಪೌಷ್ಟಿಕಾಂಶ, ಅದನ್ನು ಬಳಸುವ ವಿಧಾನ ಮತ್ತಿತರ ವಿಚಾರಗಳ ಮಾಹಿತಿ ನೀಡಿದರು.
ಮೈಸೂರಿನ ಎ.ಪಿ. ಚಂದ್ರಶೇಖರ್, ಸಾವಯವ ಕೃಷಿಕ ನಾರಾಯಣ ರೆಡ್ಡಿ, ಹಾಸನ ಕೃಷಿ ಅಧ್ಯಯನ ಕೇಂದ್ರದ ಉಪನ್ಯಾಸಕಿ ವಿಜಯಲಕ್ಷ್ಮಿ ಕಾಮರೆಡ್ಡಿ ಉಪನ್ಯಾಸ ನೀಡಿದರು. ಆಕಾಶವಾಣಿ ಉಪ ನಿರ್ದೇಶಕ ಪಿ.ಎನ್. ಸುಧಾಕರನ್, ಕಾರ್ಯಕ್ರಮ ನಿರ್ವಾಹಕಿ ರಾಜಲಕ್ಷ್ಮಿ ಶ್ರೀಧರ್ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಾಹಕ ಶ್ರೀನಿವಾಸ್ ಸ್ವಾಗತಿಸಿ, ಕೃಷಿ ವಿಭಾಗ ಮುಖ್ಯಸ್ಥ ಡಾ. ವಿಜಯ್ ಅಂಗಡಿ ನಿರೂಪಿಸಿದರು. ನಾರಾಯಣ್ ಭಟ್ ವಂದಿಸಿದರು.