ಕೊಳ್ಳೇಗಾಲ: ಬಹಳ ವರ್ಷಗಳಿಂದಲೂ ಕೆರೆ ಒತ್ತುವರಿ ಮಾಡಿಕೊಂಡು ಭತ್ತ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದ ರೈತರಿಂದ ಶುಕ್ರವಾರ ಭೂಮಿ ವಶಪಡಿಸಿಕೊಳ್ಳಲಾಯಿತು. ಜೆಸಿಬಿ ಯಂತ್ರದ ಮೂಲಕ ಕೆರೆ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ತಹಶೀಲ್ದಾರ್ ಸುರೇಶ್ಕುಮಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ತಾಲ್ಲೂಕಿನ ಹೊಂಡರಬಾಳು ಬಳಿಯ 109.88 ಎಕರೆ ಜಮೀನಿನ ಪೈಕಿ 33.38 ಎಕರೆ ಜಮೀನನ್ನು ರೈತರು ಒತ್ತುವರಿ ಮಾಡಿಕೊಂಡು ಭತ್ತ ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಇದರಿಂದ ಕೆರೆಯಲ್ಲಿ ನೀರು ನಿಲ್ಲದಂತಾಗಿ ಅಚ್ಚುಕಟ್ಟು ರೈತರಿಗೆ ತೊಂದರೆ ಉಂಟಾಗಿತ್ತು. ಈಚೆಗೆ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಹೊಂಡರಬಾಳು ಕೆರೆಯ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು.
ಒತ್ತುವರಿದಾರರಿಗೆ ತೆರವಿನ ಬಗ್ಗೆ ಸೂಚನೆ ನೀಡಿದ್ದರೂ ಸಹ ಈ ಬಾರಿ ಬತ್ತ ಬೆಳೆದಿದ್ದರು. ತಾಲ್ಲೂಕು ಆಡಳಿತ ಶುಕ್ರವಾರ ಹೊಂಡರಬಾಳು ಕೆರೆಗೆ ಅಪಾರ ಸಿಬ್ಬಂದಿ ಮತ್ತು ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ ತೆರಳಿ ತೆರವುಗೊಳಿಸಿ ಕೆರೆ ಆವರಣವನ್ನು ಖುಲ್ಲಾ ಮಾಡಿಸಿದರು.
ಶ್ರೀನಿವಾಸ್ಮೂರ್ತಿ, ನಟರಾಜ್, ನಂಜೇಗೌಡ, ಶಿವಮಲ್ಲಪ್ಪ, ಗುರುಮಲ್ಲಯ್ಯ, ಮಹದೇವಪ್ಪ, ಪಾಳ್ಯ, ರಾಮಾಪುರ ಹನೂರು ವ್ಯಾಪ್ತಿಯ ಎಲ್ಲಾ ಗ್ರಾಮಲೆಕ್ಕಿಗರು ನೀರಾವರಿ ಇಲಾಖೆ ಜೂನಿಯರ್ ಎಂಜಿನಿಯರ್ ನಟೇಶ್ ಹಾಗೂ ಪೊಲೀಸ್ ಸಿಬ್ಬಂದಿ ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.