ಉಳ್ಳಾಲ: ನಿರಂತರವಾಗಿ ಸುರಿದ ಭಾರೀ ಮಳೆಗೆ ಸೋಮೇಶ್ವರ ಪಂಚಾಯಿತಿ ವ್ಯಾಪ್ತಿಯ ನಡಾರು ಕೊರಗ ಕಾಲೊನಿಯ ಗಂಗಾಧರ ಅವರಿಗೆ ಸೇರಿದ ಮನೆ ಮಹಡಿ ಕುಸಿದುಬಿದ್ದಿದೆ.
ಕೋಟೆಕಾರು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಕುಂಪಲ ಸೋಮವಾರ ಭೇಟಿ ನೀಡಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.
ಕಳೆದ ಬುಧವಾರ ನಿರಂತರವಾಗಿ ಸುರಿದ ಭಾರೀ ಮಳೆಗೆ ಗಂಗಾಧರ-ವಾರಿಜಾ ದಂಪತಿಗೆ ಸೇರಿದ ಮನೆ ಮಹಡಿ ಕುಸಿದುಬಿದ್ದಿತ್ತು. ದುರಸ್ತಿ ಮಾಡಲು ಸಾಧ್ಯವಾಗದೆ ದಂಪತಿ ಮನೆ ಹಿಂಬದಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.
`ನಡಾರು ಕೊರಗ ಕಾಲೊನಿಗೆ ಅಭಿವೃದ್ಧಿಗೆಂದು ಸರ್ಕಾರ ಆರು ಲಕ್ಷ ರೂಪಾಯಿ ಮಂಜೂರು ಮಾಡಿದೆ. ಈ ಬಗ್ಗೆ ಎಂಜಿನಿಯರ್ಗಳ ಜತೆ ಕಾಲೊನಿಗೆ ಬೇಕಾದ ಮೂಲ ಸೌಕರ್ಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ~ ಎಂದು ಸತೀಶ್ ಕುಂಪಲ ಹೇಳಿದರು.
ಮನೆಗೆ ಹಾನಿಯಾಗಿರುವ ಗಂಗಾಧರ್ ಅವರಲ್ಲಿ ಆರ್ಟಿಸಿ ಇಲ್ಲದಿರುವುದರಿಂದ ಸರ್ಕಾರದಿಂದ ಸಿಗುವ ಪರಿಹಾರಕ್ಕೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಐಟಿಡಿಪಿ ಅಧಿಕಾರಿಗಳೊಂದಿಗೆ ಮಾತನಾಡಿ ಒಂದೂವರೆ ಲಕ್ಷ ಮೊತ್ತವನ್ನು ಮನೆ ದುರಸ್ತಿಗೆ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ. ಸದಸ್ಯ ಅನಿಲ್ ಹರಿಯಪ್ಪ ಸಾಲ್ಯಾನ್, ಜೀವನ್ ಕುಮಾರ್ ತೊಕ್ಕೊಟ್ಟು, ಗೋಪಿನಾಥ್ ಬಗಂಬಿಲ, ರಮೇಶ್ ಕೊಂಡಾಣ ಮತ್ತಿತರರು ಇದ್ದರು.