ರಾಷ್ಟ್ರಪತಿ ಚುನಾವಣೆಯಲ್ಲಿ ಸೋಲನುಭವಿಸಿ ಸುಪ್ರೀಂ ಕೋರ್ಟ್ನ ಮೊರೆ ಹೋಗಿದ್ದ, ಮಾಜಿ ಲೋಕಸಭಾ ಸ್ಪೀಕರ್ ಪಿ. ಎ. ಸಂಗ್ಮಾ ಸಲ್ಲಿಸಿದ್ದ ತಕರಾರು ಅರ್ಜಿಯನ್ನು, ಸುಪ್ರೀಂಕೋರ್ಟ್ ನ್ಯಾಯಪೀಠವು ತಳ್ಳಿ ಹಾಕಿರುವ ವಿಷಯ, ಈಗ ಚಿಂತನಾರ್ಹ ಮಾತ್ರವಲ್ಲದೆ, ಗಂಭೀರ ವಿಷಯವೂ ಆಗಿದೆ.
ಈ ಪ್ರಕರಣದಲ್ಲಿ ಅತ್ಯಂತ ಗಂಭೀರವಾದ ಕಾನೂನಿನ ಎರಡು ಅಂಶಗಳನ್ನು ಗಮನಿಸಬೇಕು.
ಮೊದಲನೆಯದಾಗಿ, ಲಾಭದಾಯಕ ಹುದ್ದೆಯಲ್ಲಿದ್ದ ಪ್ರಣವ್ ಮುಖರ್ಜಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಲ್ಲವೆಂಬ ಪಿ. ಎ. ಸಂಗ್ಮಾ ಅವರ ವಾದವನ್ನು ತಳ್ಳಿಹಾಕಲಾಗಿದೆ. ಏಕೆಂದರೆ ಆರ್ಥಿಕವಾಗಿ ಲಾಭ ಬರುವ ಮತ್ತು ಮುಖ್ಯವಾಗಿ ನೇಮಕಾತಿ ಅಧಿಕಾರವನ್ನು ಹೊಂದಿರುವ ಸರ್ಕಾರಿ ಹುದ್ದೆಗಳನ್ನು ಮಾತ್ರ, ಲಾಭದಾಯಕ ಸರ್ಕಾರಿ ಹುದ್ದೆ ಎಂದು ಪರಿಗಣಿಸಬೇಕೇ ಹೊರತು, ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಹುದ್ದೆಯಲ್ಲಿದ್ದ ಪ್ರಣವ್ ಮುಖರ್ಜಿ ಅವರನ್ನು ಸರ್ಕಾರಿ ಹುದ್ದೆಯ ಪಟ್ಟಿಗೆ ತರಲು ಸಾಧ್ಯವಿಲ್ಲ ಎಂಬುದು ಡಿಫೆನ್ಸ್ ಕೌನ್ಸೆಲ್ನ ಬಲವಾದ ಪ್ರತಿವಾದ.
ಮೂವರು ನ್ಯಾಯಾಧೀಶರ ಬಹುಮತದಿಂದ, ಪಿ. ಎ. ಸಂಗ್ಮಾ ಅವರ ತಕರಾರು ಅರ್ಜಿಯನ್ನು ತಳ್ಳಿಹಾಕಿರುವುದು, ಮತ್ತೊಂದು ಅಷ್ಟೇ ಗಮನಾರ್ಹವಾದ ಸಂಗತಿ. ಮೂಲತಃ ಒಂದು ಬುಡಕಟ್ಟು ಜನಾಂಗದಿಂದ ಬಂದವರಾದ ಪಿ. ಎ. ಸಂಗ್ಮಾ ಅವರನ್ನು, ಲೋಕಸಭಾ ಅಧ್ಯಕ್ಷರ ಸ್ಥಾನಕ್ಕೆ ತಂದು ಗೌರವಿಸಿದ್ದೇ ಕಾಂಗ್ರೆಸ್ ಪಕ್ಷ.