ಚಿಕ್ಕನಾಯಕನಹಳ್ಳಿ: ಸುಪ್ರೀಂಕೋರ್ಟ್ ನಿರ್ದೆಶನದಂತೆ ನೇಮಕಗೊಂಡಿರುವ ಕೇಂದ್ರ ಪರಿಸರ ತಜ್ಞರ ತನಿಖಾ ತಂಡ ಗುರುವಾರ ಸಹ ಕೆಲವು ಗಣಿ ಪ್ರದೇಶ ಹಾಗೂ ಸಮೀಪದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.
ಅಬ್ಬಿಗೆ ಗುಡ್ಡ ಸಾಲಿನ ಉಪೇಂದ್ರ ಮೈನಿಂಗ್ ಕಂಪನಿ ಹಾಗೂ ಸೋಂಡೇನಹಳ್ಳಿ ಭಾಗದ ಗಣಿ ಕಂಪನಿಗಳಿಗೆ ಭೇಟಿ ನೀಡಿ ಅರಣ್ಯ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಗಣಿ ಕಂಪನಿಗಳು ನಿಯಮ ಪಾಲಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಗಣಿ ಪ್ರದೇಶದ ಹಳ್ಳಿಗಳಾದ ಗೋಡೆಕೆರೆ, ಬಗ್ಗನಹಳ್ಳಿ, ಹೊಸಳ್ಳಿ, ಬಾಣದೇವರಹಟ್ಟಿ ಮುಂತಾದ ಗ್ರಾಮಗಳ ಜನರೊಂದಿಗೆ ಗಣಿಗಾರಿಕೆ ಪರಿಣಾಮದ ಬಗ್ಗೆ ತಜ್ಞರಾದ ಅರುಣ್ಕುಮಾರ್, ಸೋಮಶೇಖರ್ ಹಾಗೂ ಪ್ರಸಾದ್ರವರು ಸಂವಾದ ನಡೆಸಿದರು.
ಪರಿಶೀಲನೆಗೆ ಬಂದಿದ್ದ ರಾಮರಾವ್ ನೇತೃತ್ವದ ತಂಡ ಮೂರು ವಿಭಾಗಗಳಾಗಿದ್ದು, ಒಂದು ತಂಡ ಕಂದಿಕೆರೆ ಹೋಬಳಿ ತೀರ್ಥರಾಮೇಶ್ವರ ಕ್ಷೇತ್ರ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿದೆ. ಮತ್ತೊಂದು ತಂಡ ಹುಳಿಯಾರು ಭಾಗದ ಗಣಿ ಪ್ರದೇಶಗಳಿಗೆ ಭೇಟಿ ನೀಡಿತ್ತು.