ರಾಯಚೂರು: ಈ ವರ್ಷ ಗಣೇಶ ಚತುರ್ಥಿಯ ಗಣೇಶ ಪ್ರತಿಷ್ಠಾಪನೆಯ 5ನೇ ದಿನವಾದ ಸೋಮವಾರ ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಜಾನನೋತ್ಸವ ಸಮಿತಿಗಳು, ಯುವಕ ಸಂಘಟನೆಗಳು ಪ್ರತಿಷ್ಠಾಪಿಸಿದ 97 ಗಣೇಶಮೂರ್ತಿಗಳನ್ನು ಇಲ್ಲಿನ ಐತಿಹಾಸಿಕ ಖಾಸಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಎಲ್ವಿಡಿ ಕಾಲೇಜಿನ ಹತ್ತಿರ ಬಜರಂಗದಳ ಸಂಘಟನೆಯು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನೆ ಮಂಗಳವಾರ ಮುಂಜಾನೆ ನಡೆಯಿತು.
ಗಣೇಶಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳಲ್ಲಿ 26, ನೇತಾಜಿ ನಗರ ಠಾಣೆ ವ್ಯಾಪ್ತಿಯಲ್ಲಿನ 30, ಸದರ ಬಜಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32, ಮಾರ್ಕೆಟ್ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿನ 9 ಸೇರಿದಂತೆ ಒಟ್ಟು 97 ಸಾರ್ವಜನಿಕ ಗಣೇಶಮೂರ್ತಿಗಳ ವಿಸರ್ಜನೆ ನಡೆಯಿತು.
ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯುದ್ಧಕ್ಕೂ ಯುವಕರು, ಸಂಘಟನೆಗಳ ಪ್ರತಿನಿಧಿಗಳು ವಿವಿಧ ವಾದ್ಯವೃಂದ, ಜಾಂಜ್, ಕಿವಿಗಡಚಿಕ್ಕುವ ಸೌಂಡ್ಸಿಸ್ಟಮ್ನೊಂದಿಗೆ ಕುಣಿದರು. ಗುಲಾಲು ಎರಚಿ ಸಂಭ್ರಮಿಸಿದರು.
ಗಣೇಶಮೂರ್ತಿ ವಿಸರ್ಜನೆಗೆ ನಗರದ ಐತಿಹಾಸಿಕ ಖಾಸಬಾವಿಯಲ್ಲಿ ನಗರಸಭೆಯು ವಿಶೇಷ ವ್ಯವಸ್ಥೆ ಮಾಡಿತ್ತು. ಬೃಹತ್ ಕ್ರೇನ್, ಸಿಬ್ಬಂದಿಯನ್ನು ನಿಯೋಜಿಸಿತ್ತು. ಖಾಸಬಾವಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.