ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ, ಶಾಸ್ತ್ರಿ ಜಯಂತಿ: ತತ್ವ, ಆದರ್ಶ ಪಾಲನೆ ಕರೆ

Last Updated 3 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಗಾಂಧಿ ಮತ್ತು ಲಾಲ್ ಬಹಾದ್ದರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಇಬ್ಬರೂ ನಾಯಕರ ಗುಣಗಾನ ಮಾಡಲಾ ಯಿತು. ತತ್ವ, ಆದರ್ಶ ಪಾಲನೆಗೆ ಕರೆ ನೀಡಲಾಯಿತು.  

`ಗಾಂಧಿ, ಶಾಸ್ತ್ರಿಎಂದಿಗೂ ಪ್ರಸ್ತುತ~
ಕಡೂರು: ರಾಷ್ಟ್ರದ ಶ್ರೇಯಸ್ಸು ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರಂತಹ ನಾಯಕರ ಆದರ್ಶ, ವ್ಯಕ್ತಿತ್ವ ಎಂದೆಂದಿಗೂ ಪ್ರಸ್ತುತ, ಇಂದಿನ ಯುವ ಪೀಳಿಗೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಶಾಸಕ ಡಾ.ವೈ.ಸಿ.ವಿಶ್ವನಾಥ್ ಕರೆ ನೀಡಿದರು.

ಕಡೂರು ತಾಲ್ಲೂಕು ಆಡಳಿತ, ತಾಲ್ಲೂಕು ಕಚೇರಿಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೀರೂರು ಕೆಎಲ್‌ಕೆ ಕಾಲೇಜಿನ ಪ್ರಾಂಶುಪಾಲರಾದ ಯಶೋದಮ್ಮ ಮಾತನಾಡಿ ಶತಮಾನ ಕಂಡಂತಹ ಮಹಾನ್ ವ್ಯಕ್ತಿ ಗಾಂಧೀಜಿ ಎಂದರು.

ಸರ್ವಧರ್ಮ ಪ್ರಾರ್ಥನೆ ಅಂಗವಾಗಿ ಕೆ.ಪಿ. ಶ್ರೀಧರ್ ಭಗವದ್ಗೀತೆ ಪಠಿಸಿದರೆ, ಫೆರಯಾಸ್ ಮೋರಸ್ ಬೈಬಲ್ ಮತ್ತು ದೊಡ್ಡ ಮಸೀದಿಯ ಗುರುಗಳಾದ ಮಹಮದ್ ಇಸಾಕ್ ಕುರಾನ್ ಪಠಣ ಮಾಡಿದರು.
 ಮಹಾತ್ಮಾಗಾಂಧಿಯವರ ಜೀವನ ಸಾಧನೆ ಕುರಿತು ಎಪಿಎಂಸಿ ಅಧ್ಯಕ್ಷ ಚಿಕ್ಕದೇವನೂರು ರವಿ ಮಾತನಾಡಿದರು. 

ತಾಲ್ಲೂಕು ಶಿರಸ್ತೇದಾರ್ ತಿಮ್ಮಾಭೋವಿ, ಕಾರ್ಯನಿರ್ವಹಣಾಧಿಕಾರಿ ಟಿ.ಎನ್.ಮೂರ್ತಿ, ನೌಕರರ ಸಂಘದ ಅಧ್ಯಕ್ಷ ಚನ್ನಪ್ಪ ಇಂಗ್ಲಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ಹಾಗೂ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು. ಶಿಕ್ಷಕ ಬ್ಯಾಗಡೇಹಳ್ಳಿ ಬಸವರಾಜು ಗಾಂದಿಜೀಯವರ ವೇಷಧರಿಸಿ ಸೇರಿದ್ದ ಜನರ ಗಮನ ಸೆಳೆದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯಿಂದ ಗುರುತಿಸಿದ ಫಲಾನುಭವಿಗಳಿಗೆ ಸೌಲಭ್ಯಗಳ ಚೆಕ್‌ಗಳನ್ನು ಶಾಸಕ ಡಾ.ವೈ.ಸಿ.ವಿಶ್ವನಾಥ್ ವಿತರಿಸಿ ದರು. ಕಾರ್ಯಕ್ರಮವನ್ನು ಗುರುರಾಜ್ ಹಾಲ್ಮಠ್ ನಡೆಸಿಕೊಟ್ಟರು.  
   
`ಪ್ರಕರಣಗಳ ಹೊರೆ ಅಧಿಕ~
ಕೊಪ್ಪ: ಗ್ರಾಮೀಣ ಭಾರತದ ಗ್ರಾಮಗಳಲ್ಲಿ ಹಿರಿಯರು ನಡೆಸುತ್ತಿದ ನ್ಯಾಯಪಂಚಾಯಿತಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಲ ಯಗಳಲ್ಲಿ ಪ್ರಕರಣಗಳ ಹೊರೆ ಅಧಿಕವಾಗಿದೆ ಎಂದು ಹಿರಿಯ ವಕೀಲ ಮೀಗಾ ಚಂದ್ರಶೇಖರ್ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಗಾಂಧಿಜಯಂತಿ ಅಂಗವಾಗಿ ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ ಮಂಗಳವಾರ ಏರ್ಪಡಿಸಿದ್ದ ಮಧ್ಯಸ್ಥಿಕೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ವೀರಭದ್ರಯ್ಯ ಮಾತನಾಡಿ, ಉಚಿತ ಕಾನೂನು ನೆರವು ಸಮಿತಿ ಗ್ರಾಮೀಣರಲ್ಲಿ ಕಾನೂನಿನ ಅರಿವು ಮೂಡಿಸುತ್ತಿದೆ. ನ್ಯಾಯದಾನದಾನದಲ್ಲಿ ರಾಜಿ ಪಂಚಾಯಿತಿ ಹಾಗೂ ಮಧ್ಯಸ್ಥಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಡಿವೈಎಸ್‌ಪಿ. ಜಗದೀಶ್, ವೃತ್ತ ಪೊಲೀಸ್ ಅಧಿಕಾರಿ ಎಸ್.ಪಾಟೀಲ್, ವಕೀ ಲರ ಸಂಘದ ಕಾರ್ಯದರ್ಶಿ ಅದರ್ಶ ಇದ್ದರು.

`ಆದರ್ಶ ಮಾದರಿಯಾಗಲಿ~
ಬೀರೂರು: ಮಹಾತ್ಮ ಗಾಂಧಿ ಅವರ ಆದರ್ಶ ಮತ್ತು ತತ್ವಗಳನ್ನು ಕಟ್ಟಿಡುವ ಬದಲು ಸಮಾ ಜಕ್ಕೆ ಮಾದರಿಯಾಗುವಂತೆ ಜನಸೇವಕರು ರೂಢಿಯಲ್ಲಿ ತಂದು ಅವು ನಿರಂತರ ಇರುವಂತೆ ನೋಡಿಕೊಳ್ಳಬೇಕು ಎಂದು ಪುರಸಭಾ ಸದಸ್ಯ ಎಸ್.ಎಸ್.ದೇವರಾಜ್ ಕರೆ ನೀಡಿದರು.

ಮಹಾತ್ಮಗಾಂಧಿ ಜನ್ಮದಿನಾಚರಣೆ ಅಂಗವಾಗಿ ಬೀರೂರು ಪುರಸಭೆಯಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪುರಸಭಾಧ್ಯಕ್ಷ ಎಸ್.ರಮೇಶ್, ಮುಖ್ಯಾ ಧಿಕಾರಿ ಓಂಕಾರಮೂರ್ತಿ ಮಾತನಾಡಿದರು.

ಪುರಸಭೆಯಲ್ಲಿ ನಡೆದ ಕಾರ್ಯಕ್ರಮದ ಬಳಿಕ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ
ಮೆರವಣಿಗೆಯಲ್ಲಿ ತೆರಳಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಎಂ. ವಿನಾಯಕ್,ಎಂ.ಪಿ.ದಯಾನಂದ,ಡಿ.ಆರ್.ಯತೀಶ್,ಎ.ಸಿ.ಸತೀಶ್, ಉಪಾಧ್ಯಕ್ಷೆ ಬಿ.ಟಿ. ಸಾಕಮ್ಮ, ಸುಕನ್ಯಾ, ಬಿ.ಸಿ.ಪ್ರಕಾಶ್, ಮೀನಾಕ್ಷಮ್ಮ ಪುರಸಭಾ ಸಿಬ್ಬಂದಿ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.  

`ಗಾಂಧೀಜಿ ಯುಗಪುರುಷ~
ಬೀರೂರು: ಮಹಾತ್ಮ ಗಾಂಧಿ ಜನಸಾಮಾನ್ಯರ ಹಕ್ಕು ಮತ್ತು ಸ್ವಾತಂತ್ರ್ಯಕ್ಕಾಗಿ ದುಡಿದ ಯುಗಪುರುಷ ಎಂದು ಖರೀದಿ ಪಾಲಮ್ಮ ಶಾಲೆಯ ಮುಖ್ಯಶಿಕ್ಷಕಿ ಕಮಲಮ್ಮ ನುಡಿದರು.

ಪಟ್ಟಣದ ಹಳೇಪೇಟೆಯ ಶಾಲಾ ಆವರಣದಲ್ಲಿ ಮಂಗಳವಾರ ಆಚರಿಸಲಾದ ಮಹಾತ್ಮ ಗಾಂಧಿಯವರ 144ನೇ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಸಹಶಿಕ್ಷಕರಾದ ಮಲಿಯಪ್ಪ, ಶಂಕರಮ್ಮ ಮತ್ತು ಮಹದೇವ ಗಾಂಧೀಜಿ ಜೀವನಚರಿತ್ರೆ ಮತ್ತು ಆದರ್ಶಗಳ ಕುರಿತು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈಯದ್‌ಆಫೀಜ್, ಶಿಕ್ಷಕರಾದ ಸುರೇಖಾ, ಭಾರತಿ, ಪೂರ್ಣಿಮಾ ಮತ್ತು ಮಕ್ಕಳು ಪಾಲ್ಗೊಂಡರು.

`ಮಹಾತ್ಮಗಾಂಧಿ, ಶಾಸ್ತ್ರಿ ಸ್ಮರಿಸಿ~
ಅಜ್ಜಂಪುರ: ಗಾಂಧೀಜಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಳಸಿದ ಸತ್ಯ, ಅಹಿಂಸೆ, ಸತ್ಯಾಗ್ರಹದಂತಹ ಹೋರಾಟದ ಅಸ್ತ್ರಗಳು ಇಂದಿಗೂ ವಿಶ್ವದಾದ್ಯಂತ ನಡೆಯುವ ಅನೇಕ ಹೋರಾಟಗಳಿಗೆ  ಸ್ಫೂರ್ತಿಯಾಗಿದ್ದು, ಅವರ ಸ್ಮರಣೆ ನಮ್ಮೆಲ್ಲರ ಕರ್ತವ್ಯ ಎಂದು ಶೆಟ್ರು ಸಿದ್ದಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರಾದ ಕಮಲಮ್ಮ ತಿಳಿಸಿದರು.

 ಪಟ್ಟಣದ ಕಾಲೇಜಿನಲ್ಲಿ ಮಂಗಳವಾರ ನಡೆದ ಗಾಂಧಿ ಮತ್ತು ಲಾಲ್‌ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

ಪ್ರೌಢಶಾಲಾ ವಿಭಾಗದ ಉಪಪ್ರಾಚಾ ರ್ಯರಾದ ಬಿ.ಎಸ್. ನಾಗರಾಜಪ್ಪ ಮಾತನಾಡಿ, ಗಾಂಧಿ ಶಾಂತಿಗೆ, ಶಾಸ್ತ್ರಿ ಪ್ರಾಮಾಣಿಕತೆಗೆ ಪ್ರಸಿದ್ಧಿಯಾಗಿದ್ದು, ಅವರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿಧ್ಯಾರ್ಥಿ ಗಳಿಗೆ ಕರೆ ನೀಡಿದರು.ವಿದ್ಯಾರ್ಥಿಗಳಿಂದ ಸರ್ವ ಧರ್ಮ ಪ್ರಾರ್ಥನೆ, ಎನ್.ಎಸ್.ಎಸ್.  ಶ್ರಮದಾನ ನಡೆಯಿತು. ಉಪನ್ಯಾಸಕರಾದ ಓಂಕಾರಮೂರ್ತಿ, ನಟರಾಜ್, ಬಸವರಾಜಯ್ಯ, ಬಿ.ರಾಜಪ್ಪ, ವಿದ್ಯಾರ್ಥಿಗಳು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT