ಸೋಮವಾರಪೇಟೆ: ವಿಧಾನಸಭಾ ಚುನಾವಣೆಯಲ್ಲಿ ಗಿರಿಜನರು ಕಡ್ಡಾಯ ಮತದಾನದಲ್ಲಿ ಭಾಗವಹಿಸುವಂತೆ ಬಾಣಾವಾರ ಗಿರಿಜನರ ಕಾಡು ಹಾಡಿಯಲ್ಲಿ ಇತ್ತೀಚೆಗೆ ಜನಜಾಗೃತಿ ಮೂಡಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ಗಳು, ಆಶ್ರಮ ಶಾಲೆಯ ಶಿಕ್ಷಕರು, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ, ಅಂಗನ ವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಡಿಯಲ್ಲಿ ಮೆರವಣಿಗೆ ನಡೆಸಿ, ಮತದಾರರು ಮತದಾನದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ಗೆ ಸೇರ್ಪಡೆ
ಸಮೀಪದ ಬೇಳೂರು ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 30ಕ್ಕೂ ಅಧಿಕ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬಜೆಗುಂಡಿ ಗ್ರಾಮದ ಮಹೇಶ್, ಲೋಕೇಶ್, ದಿಲೀಪ್, ಹಾನಗಲ್ಲಿನ ಸುನಿಲ್, ದಿವಾಕರ್ ಸೇರಿದಂತೆ 30ಕ್ಕೂ ಅಧಿಕ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಎ. ಯಾಕೂಬ್, ಪ್ರಮುಖರಾದ ಎಚ್.ಸಿ. ನಾಗೇಶ್, ವಿ.ಎ. ಲಾರೆನ್ಸ್, ಮಂದಣ್ಣ, ಬೊಳ್ಳು ಚಂಗಪ್ಪ, ಕಾರ್ಯಪ್ಪ, ಕೃಷ್ಣಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.