ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೃಹಿಣಿಯ ಕೈಯಲ್ಲಿ ಗಣಪ...

Last Updated 26 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

`ಪ್ರಣಮ್ಯ ಶಿರಸಾದೇವಂ
ಗೌರಿಪುತ್ರಂ ವಿನಾಯಕಂ/
ಭಕ್ತಾವಾಸಂ
ಸ್ಮರೇನ್ನಿತ್ಯಮಾಯುಃ
ಕಾಮಾರ್ಥ ಸಿದ್ಧಯೇ

ಹೀಗೆ ನಾರದ ಪುರಾಣದ ವಿಘ್ನವಿನಾಶಕನಾದ ಗಣಪತಿಯ ದ್ವಾದಶನಾಮಗಳ ಸ್ತೋತ್ರವನ್ನು ಪಠಿಸಿ ಶ್ರದ್ಧಾಭಕ್ತಿಗಳಿಂದ ಆಚರಿಸುವ ಗಣೇಶಚತುರ್ಥಿ ಹತ್ತಿರ ಬಂದಿದೆ.

ಈಗಾಗಲೇ ಸಂಭ್ರಮದಿಂದ ಎಲ್ಲೆಡೆ ತಯಾರಿ ನಡೆಯುತ್ತಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ವಿನಾಯಕನು ವಿಗ್ರಹ ರೂಪದಲ್ಲಿ ಎಲ್ಲರ ಮನೆ- ಮನಗಳಲ್ಲಿ ವಿಜೃಂಭಿಸಲಿದ್ದಾನೆ. ಅಂತೆಯೇ ಕಲಾವಿದರು ಗಣಪನನ್ನು ಸೃಷ್ಟಿಸುವ ಕೆಲಸ ಭರದಿಂದ ಸಾಗಿದೆ.

ಆದರೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬನದಕೊಪ್ಪ ಎಂಬ ಊರಿನ ಶ್ರೀಮತಿ ಶ್ರೀಪಾದರಾವ್ ಎಂಬ ಗೃಹಿಣಿ ತಮಗೆ ಬೇಕಾದ ಮೂರ್ತಿಯನ್ನು ತಾವೇ ತಯಾರಿಸಿಕೊಳ್ಳುತ್ತಾರೆ.

ತಮ್ಮ ಮನೆಯಲ್ಲಿ ಚೌತಿಹಬ್ಬದಂದು ಗಣಪತಿಯನ್ನು ಕೂರಿಸಿ ಪೂಜಿಸಲು ತಾವೇ ಸ್ವತಃ ಗಣೇಶನ ಮಣ್ಣಿನ ಮೂರ್ತಿಯನ್ನು ತಯಾರಿಸಿಕೊಳ್ಳುವುದು ಶ್ರೀಮತಿ ಅವರ ವೈಶಿಷ್ಟ್ಯ.

ಇವರು ಚೌತಿಹಬ್ಬಕ್ಕೆ ಒಂದು ತಿಂಗಳು ಮುಂಚೆಯೇ ಊರಹತ್ತಿರದ ಕೆರೆಯ ಮಣ್ಣನ್ನು ತಂದು, ಅದನ್ನು ಹದಗೊಳಿಸಿ ಮುದ್ದೆ ಮಾಡಿಟ್ಟುಕೊಳ್ಳುತ್ತಾರೆ. ಒಂದು ವಾರದ ನಂತರ ಆ ಮುದ್ದೆಯನ್ನು ಕೈಯಿಂದ ತಿಕ್ಕಿ ಮೆತ್ತಗೆ ಚಪಾತಿ ಹಿಟ್ಟಿನ ತರ ಮಾಡಿ ಚಿಕ್ಕ ಚಿಕ್ಕ  ಉಪಕರಣಗಳ ಸಹಾಯದಿಂದ ಮುದ್ದೆಯನ್ನು ಕೊರೆದು ಪಾದಗಳಿಂದ ಆರಂಭಿಸಿ ಕಾಲು, ಬೆರಳುಗಳು, ಹೊಟ್ಟೆ-ಕೈ, ಭುಜ, ಮುಖ, ಕಣ್ಣು, ಅಗಲವಾದ ಕಿವಿ, ಸೊಂಡಿಲು, ತಲೆ, ಕಿರೀಟ, ಕೈ ಆಯುಧಗಳು, ಕೊರಳಸರ, ಸೊಂಟದ ಆಭರಣಗಳು, ಎಡಗೈ ಅಂಗೈ ಮೇಲಿನ ಲಾಡು ಉಂಡೆಗಳು, ಅಭಯಹಸ್ತದ ಬಲಗೈ, ಸೊಂಟಕ್ಕೆ ಹಾವು, ಪಾದಗಳ ಬಳಿ ಇಲಿ, ಆಸೀನನಾಗಲು ಪೀಠ ಅಥವಾ ಕಮಲದ ಹೂ ಹೀಗೆ ಗಣಪನ ರೂಪದ ಎಲ್ಲಾ ಸಿದ್ಧತೆ ಮಾಡುತ್ತಾರೆ. ಆಗಾಗ್ಗೆ ವಿಗ್ರಹದಲ್ಲಿ ಬಿರುಕುಗಳು ಬಾರದಂತೆ ಕೈಯಿಂದ ಮುದ್ದೆಯನ್ನು ನಯವಾಗಿ ಉಜ್ಜುತ್ತಾರೆ.

ಒಂದೆರಡು ವಾರಗಳ ನಂತರ ಮೂರ್ತಿಯ ಹಸಿಮಣ್ಣು ಒಣಗಿದ ಮೇಲೆ ಆಯ್ಕೆ ಮಾಡಿಕೊಂಡ ಬಣ್ಣಗಳನ್ನು ಬಳಿಯುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಮುದ್ದುಮೊಗದ ಚಂದದ ಗಣಪತಿಯು ಶ್ರೀಮತಿಯವರ ಮನೆಯಲ್ಲಿ ಪೂಜೆಗೆ ಅಣಿಯಾಗುತ್ತಾನೆ.
ತಮ್ಮ ಗೃಹಕೃತ್ಯಗಳ ನಡುವೆ ಬಿಡುವು ಮಾಡಿಕೊಂಡು ವಿಶೇಷ ತಾಳ್ಮೆ-ಶ್ರಮ-ಶ್ರದ್ಧೆ ವಹಿಸಿ ಗಣಪನ ಮೂರ್ತಿಯನ್ನು ತಯಾರಿಸುವ ಶ್ರೀಮತಿಯವರ ಜಾಣ್ಮೆ-ಕರಕುಶಲತೆ ವಿಶೇಷವಾದುದು.
 
`ಹವ್ಯಾಸಕ್ಕೆಂದು ಕಲಿತ ಈ ಕಲೆಯಿಂದ ತುಂಬಾ ಸಂತೋಷವಾಗಿದೆ. ಪ್ರತಿ ವರ್ಷ ಮನೆಗೆ  ನಾನೇ ಗಣಪನನ್ನು ತಯಾರಿಸುವಲ್ಲಿ ಬಹಳ ಖುಷಿ ಇದೆ~ ಎನ್ನುತ್ತಾರೆ ಶ್ರೀಮತಿ. ಅವರು ತಮ್ಮ ಬಾಲ್ಯದಿಂದಲೇ ಮಣ್ಣಿನಲ್ಲಿ ಸಣ್ಣ ಸಣ್ಣ ಈಶ್ವರಲಿಂಗ, ಹಾವು, ಇಲಿ, ಬೆಕ್ಕು, ಚೇಳು, ಒಲೆ, ಒರಳುಕಲ್ಲು, ಮನೆ, ಮನುಷ್ಯ ಇತ್ಯಾದಿ ಆಕೃತಿಗಳನ್ನು ಮಾಡಲು ಕಲಿತಿದ್ದರು. ಸೊಗಸಾದ ಅಡುಗೆ ತಯಾರಿಕೆ, ಪೇಂಟಿಂಗ್ ಮತ್ತು ಗಾರ್ಡನಿಂಗ್ ಇವರ ಹವ್ಯಾಸಗಳು. ಬಿ.ಕಾಂ. ಪದವೀಧರೆಯಾದ ಇವರ ಪತಿ ಸಾಗರದ ಪ್ರಗತಿ ಗ್ರಾಮೀಣ ಬ್ಯಾಂಕ್ ಉದ್ಯೋಗಿ. ಪತಿ ಹಾಗೂ ಮಕ್ಕಳ ಪ್ರೋತ್ಸಾಹ ತಮಗಿದೆ ಎನ್ನುತ್ತಾರೆ ಶ್ರೀಮತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT