ಬೆಂಗಳೂರು: ರಾಜ್ಯ ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಇ- ಆಡಳಿತ ಇಲಾಖೆ ಹಾಗೂ ಟಾಟಾ ಕನ್ಸಲ್ಟೆನ್ಸಿ ಸಹಯೋಗದಲ್ಲಿ ಬುಧವಾರ ನಡೆದ ಗ್ರಾಮೀಣ ರಾಷ್ಟ್ರೀಯ ಐಟಿ ರಸಪ್ರಶ್ನೆ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಯು.ಎಂ. ಸ್ವಪ್ನಿಲ್, ಆರ್. ಸುಪ್ರೀತ್ ವಿಜೇತರಾದರು.
ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಿತು. ಇಂದೂರಿನ ಅಟೊಮಿಕ್ ಎನರ್ಜಿ ಸೆಂಟ್ರಲ್ ಶಾಲೆಯ ಪ್ರಕಾಶ್ ಅಗರ್ವಾಲ್ ಹಾಗೂ ಅಭಿಷೇಕ್ ನಾಯಕ್ ಅವರು ದ್ವಿತೀಯ ಬಹುಮಾನ ಪಡೆದರೆ, ರಾಂಚಿಯ ಡಿಎವಿ ಪಬ್ಲಿಕ್ ಶಾಲೆಯ ಅಭಿಷೇಕ್ ಭಟ್ಟಾಚಾರ್ಯ ಹಾಗೂ ಧವಲ್ ಚೌಹಾಣ್ ತೃತೀಯ ಬಹುಮಾನ ಪಡೆದರು.
ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ 75,000 ರೂಪಾಯಿ ವಿದ್ಯಾರ್ಥಿವೇತನ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ ರೂ 40,000 ಹಾಗೂ ರೂ 20,000 ವಿದ್ಯಾರ್ಥಿವೇತನ ನೀಡಲಾಯಿತು. ರಾಷ್ಟ್ರಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದ ಇತರೆ ತಂಡದ ವಿದ್ಯಾರ್ಥಿಗಳಿಗೆ ಸೆಲ್ಫೋನ್ ಹಾಗೂ ಐಪಾಡ್ಗಳನ್ನು ವಿತರಿಸಲಾಯಿತು.
ವಿಜೇತರಾದ ವಿದ್ಯಾರ್ಥಿಗಳಿಗೆ ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಬಹುಮಾನ ವಿತರಿಸಿದರು. ಚಿತ್ರನಟಿಯರಾದ ಭಾವನಾ, ರಾಧಿಕಾ ಪಂಡಿತ್ ಇತರರು ಪಾಲ್ಗೊಂಡಿದ್ದರು.