ಚಡಚಣ: ಪಟ್ಟಣಕ್ಕೆ ಸುಮಾರು ಹತ್ತು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. ಸುಮಾರು ಹತ್ತು ತಿಂಗಳುಗಳಿಂದ ಭೀಮಾ ನದಿಯಿಂದ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ಹತ್ತು ದಿನಗಳಿಂದ ಇದ್ದಕ್ಕಿದ್ದಂತೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ವಿಚಾರಿಸಿದರೆ, ‘ಭೀಮಾ ನದಿಯಲ್ಲಿ ನೀರು ಮುಗಿದು ಹೋಗಿದೆ. ಹೀಗಾಗಿ ನೀರು ಬಿಡುವುದು ಸಾಧ್ಯವಿಲ್ಲ’ ಎಂದು ಉತ್ತರಿಸುತ್ತಾರೆ.
ನದಿಯಲ್ಲಿ ನೀರಿನ ಹರಿವು ನಿಂತಿರುವುದರಿಂದ ನೀರು ಪೂರೈಸಲು ಸಾಧ್ಯವಾಗುವುದಿಲ್ಲ ಎಂದಾದರೆ ಗ್ರಾಮ ಪಂಚಾಯಿತಿ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಲ್ಲ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಸುಮಾರು 3 ಕೋಟಿ 30ಲಕ್ಷ ರೂಪಾಯಿ ವೆಚ್ಚದಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನ ಗೊಳಿಸಲಾಗಿದೆ. ಆದರೆ ಈ ಯೋಜನೆಯ ಉದ್ಘಾಟನೆಯ ಮುನ್ನವೇ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಯೋಜನೆಯ ಅವೈಜ್ಞಾನಿಕ ಅನುಷ್ಠಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಪಟ್ಟದ ಮಧ್ಯ ಭಾಗದಲ್ಲಿ ಹಾದು ಹೋಗುವ ಬೋರಿ ಹಳ್ಳವೂ ಈಗಾಲೇ ಬತ್ತಿ ಹೋಗಿದ್ದರಿಂದ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಸುಮಾರು ಮೂರ್ನಾಲ್ಕು ಕಿ.ಮೀ ಗಳಿಂದ ಹೊತ್ತು, ಸೈಕಲ್ ಇಲ್ಲವೇ ಬೈಕ್ ಮೂಲಕ ನೀರು ತರುವುದು ಸಾಮಾನ್ಯವಾಗಿದೆ.
ಬೇಸಿಗೆಯ ಮುನ್ನವೇ ಈ ಪರಿಸ್ಥಿತಿ ಉಂಟಾದರೆ, ಬೇಸಿಗೆಯಲ್ಲಿ ಏನು ಮಾಡುವುದು ಎಂಬುದು ಗ್ರಾಮಸ್ಥರ ಚಿಂತೆ. ಕೂಡಲೇ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಪಟ್ಟಣಕ್ಕೆ ನೀರು ಪೂರೈಸುವ ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.