ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿಯಲ್ಲಿ ಮೀಸಲಾತಿ ಸೌಲಭ್ಯದಿಂದ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಉಪಾಧ್ಯಕ್ಷ ಸ್ಥಾನ ಗಳಿಸಿದ್ದ ಸಿಪಿಎಂ ಶನಿವಾರ ಅವಿಶ್ವಾಸ ನಿರ್ಣಯ ಮಂಡನೆಯಿಂದಾಗಿ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಸಾವಿತ್ರಮ್ಮ ಅವರು ಸ್ಥಾನ ತ್ಯಜಿಸಬೇಕಾಯಿತು.
ಜಿಲ್ಲಾ ಪಂಚಾಯಿತಿಯ ಒಟ್ಟು 27 ಕ್ಷೇತ್ರಗಳಲ್ಲಿ ಸಿಪಿಎಂ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಪಾಧ್ಯಕ್ಷೆ ಸ್ಥಾನವು ಹಿಂದುಳಿದ ವರ್ಗ-ಎ (ಮಹಿಳೆ) ವರ್ಗಕ್ಕೆ ಮೀಸಲಾದ ಕಾರಣ ಸಾವಿತ್ರಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಸಾವಿತ್ರಮ್ಮ ಅವರ ಅಧಿಕಾರ ಅವಧಿ ಅಕ್ಟೋಬರ್ವರೆಗೆ ಇತ್ತು. ಅವಧಿ ಪೂರ್ಣಗೊಳ್ಳುವ ಮುನ್ನವೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಅವರು ಸೇರಿದಂತೆ ಇತರ ಸದಸ್ಯರು ಶನಿವಾರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು 7 ಮಂದಿ ಸದಸ್ಯರು ಬೆಂಬಲಿಸಿದರು.