ಚಿಕ್ಕಬಳ್ಳಾಪುರ: ತಾಲ್ಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7ರ ಬದಿಯಲ್ಲಿರುವ ಚಿಕ್ಕಮರಳಿ ಕ್ರಾಸ್ನ ರಸ್ತೆಯಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದ್ದು, ಶುಕ್ರವಾರವೂ ತಿಂಡಿ-ತಿನಿಸು ಹೊತ್ತೊಯ್ಯುತ್ತಿದ್ದ ಲಾರಿ ಉರುಳಿಬಿದ್ದಿದೆ.
ಅದೃಷ್ಟವಶಾತ್ ಲಾರಿ ಚಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. 2 ವಾರದ ಹಿಂದಷ್ಟೇ ಸೌದೆ ತುಂಬಿದ್ದ ಲಾರಿ ಇದೇ ರೀತಿ ಉರುಳಿಬಿದ್ದಿತ್ತು.
`ನಂದಿ ಕ್ರಾಸ್ನ ಸರ್ವೀಸ್ ರಸ್ತೆಯಿಂದ ನೇರವಾಗಿ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮರ್ಪಕವಾಗಿ ನಿರ್ಮಿಸಿಲ್ಲ. ಸುರಕ್ಷಿತ ರಸ್ತೆ ಸೌಲಭ್ಯ ಇಲ್ಲ. ಪದೇ ಪದೇ ಅಪಘಾತ ಸಂಭವಿಸುತ್ತವೆ. ವಾಹನ ಚಾಲಕರಿಗೆ ಮತ್ತು ಜನರ ಪ್ರಾಣಕ್ಕೆ ಕಂಟಕವಾಗಿದೆ~ ಎಂದು ನಂದಿ ಕ್ರಾಸ್ ಸುತ್ತಮುತ್ತಲ ರೈತರು ಪ್ರತಿಭಟನೆ ನಡೆಸಿದ್ದರು.
`ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ನೀಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರನ್ನು ಸಮರ್ಪಕ ರಸ್ತೆ ಸೌಲಭ್ಯಕ್ಕೆ ಒತ್ತಾಯಿಸಿದ್ದೆವು. ಆದರೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ ಪದೇ ಪದೇ ಅಪಘಾತಗಳಾಗುತ್ತಿವೆ.
ಸರ್ವೀಸ್ ರಸ್ತೆಯಿಂದ ಮೇಲ್ಸೇತುವೆಗೆ ಹೋಗುವ ಮಾರ್ಗದಲ್ಲಿ ಎಲ್ಲಿಯೂ ನಾಮಫಲಕ ಅಥವಾ ಮಾರ್ಗಸೂಚಿ ಅಳವಡಿಸಿಲ್ಲ. ವಾಹನ ಚಾಲನೆ ಮಾಡುವಾಗ ಕೆಲ ಸಂದರ್ಭಗಳಲ್ಲಿ ಚಾಲಕರು ನಿಯಂತ್ರಣ ಕಳೆದುಕೊಳ್ಳುತ್ತಾರೆ. ಆಗ ಅಪಘಾತಗಳು ಸಂಭವಿಸುತ್ತವೆ~ ಎಂದು ರೈತ ಮೂರ್ತಿ ತಿಳಿಸಿದರು.
`ಇಲ್ಲಿ ಆಗಾಗ್ಗೆ ಸಣ್ಣಪುಟ್ಟ ಅಪಘಾತ ಸಂಭವಿಸುತ್ತವೆ. ಈವರೆಗೆ ನಾಲ್ಕು ಲಾರಿ ಉರುಳಿಬಿದ್ದಿವೆ. ಸೌದೆ ಲಾರಿ ಅಪಘಾತಕ್ಕೀಡಾದ ಕೆಲ ದಿನಗಳ ಹಿಂದಷ್ಟೇ ನೀರಿನ ಟ್ಯಾಂಕರ್ ಮತ್ತು ಟೆಂಪೊ ಉರುಳಿಬಿದ್ದಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮ ಅಳವಡಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಶೀಘ್ರ ಕ್ರಮ ಕೈಗೊಂಡರೆ ಅಪಘಾತ ನಿಯಂತ್ರಿಸಬಹುದು~ ಎಂದು ಹೇಳಿದರು.