ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ದಾನದ ವಿರುದ್ಧ ಕಾನೂನು ಹೋರಾಟ

Last Updated 5 ಅಕ್ಟೋಬರ್ 2012, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಡ್ನಾಳ ಸಮೀಪದ 23.32 ಎಕರೆ ಮಠದ ಜಮೀನನ್ನು ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿರುವುದನ್ನು ವಿರೋಧಿಸಿ ಮೂರು ಸಾವಿರ ಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ ಅವರಿಗೆ ಮಠದ ಭಕ್ತ ಹಾಗೂ ವಿಶ್ವ ಹಿಂದೂ ಪರಿಷತ್ ನಗರ ಘಟಕದ ಜಂಟಿ ಕಾರ್ಯದರ್ಶಿ ಮಹಾಂತೇಶ ಗಿರಿಮಠ ಪತ್ರ ಬರೆದಿದ್ದಾರೆ.

ಮಠಕ್ಕೆ ಸೇರಿದ ಆಸ್ತಿಯನ್ನು ದಾನ ಮಾಡುವ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಮನವಿ ಮಾಡಿರುವ ಅವರು, ತಪ್ಪಿದಲ್ಲಿ ಕಾನೂನು ಹೋರಾಟ ಕೈಗೊಳ್ಳುವುದಾಗಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ನ್ಯಾಯಾಲಯದ ಆದೇಶದ ಉಲ್ಲಂಘನೆ:
ಈ ಹಿಂದೆ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಮಠದ ಪೀಠಾಧಿಕಾರಿಯಾಗಿದ್ದ ವೇಳೆ ರುದ್ರಮುನಿ ದೇವರು ಅವರೊಂದಿಗೆ ಉಂಟಾಗಿದ್ದ ಉತ್ತರಾಧಿಕಾರಿ ವಿವಾದದ ಸಂದರ್ಭದಲ್ಲಿ ರಾಜೀ ಪಂಚಾಯಿತಿಗೆ ಸುಪ್ರೀಂಕೋರ್ಟ್ ನೇಮಿಸಿದ್ದ ಮಧ್ಯವರ್ತಿ ಸಮಿತಿ ಮಠದ ಆಸ್ತಿಗಳನ್ನು ಪರಭಾರೆ ಮಾಡದಂತೆ ಸ್ಪಷ್ಟ ನಿರ್ದೇಶನ ನೀಡಿದೆ.

ಕೆಎಲ್‌ಇ ಸಂಸ್ಥೆಗೆ ಜಮೀನು ದಾನವು 2009 ಜುಲೈ 16 ರಂದು  ಸುಪ್ರೀಂಕೋರ್ಟ್‌ನ ಮಧ್ಯವರ್ತಿ ಸಮಿತಿ ನೀಡಿದ್ದ ತೀರ್ಪಿನ 6ನೇ ಪ್ಯಾರಾದಲ್ಲಿ ನೀಡಿದ್ದ ನಿರ್ದೇಶನದ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ವಂತಿಗೆ ನೀಡುತ್ತೇವೆ: `ಕೆಎಲ್‌ಇ ಸಂಸ್ಥೆಗೆ ಜಮೀನು ನೀಡುವ ಬದಲು, ಹಿರಿಯ ಸ್ವಾಮೀಜಿ ಹೆಸರನ್ನು ಚಿರಸ್ಥಾಯಿಯಾಗಿಸಲು ಮಠದಿಂದಲೇ ವೈದ್ಯಕೀಯ ಕಾಲೇಜು ಕಟ್ಟಿಸಿ. ಮಠದ ಉನ್ನತಾಧಿಕಾರ ಸಮಿತಿಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಇದ್ದಾರೆ. ಅವರು ಮನಸ್ಸು ಮಾಡಿದಲ್ಲಿ ಮಠದ ಭಕ್ತರಿಂದಲೇ ವಂತಿಗೆ ಸಂಗ್ರಹಿಸಿ ಕಾಲೇಜು ಕಟ್ಟಿಸಬಹುದು. ಶ್ರೀಮಠದ ಸಾವಿರಾರು ಭಕ್ತರು ವಂತಿಗೆ ನೀಡಲು ಸಿದ್ಧರಿದ್ದಾರೆ~ ಎಂದು ಮಹಾಂತೇಶ ಗಿರಿಮಠ ಹೇಳಿದ್ದಾರೆ.

ಹುಬ್ಬಳ್ಳಿಯ ಮಂಗಳವಾರ ಪೇಟೆ ನಿವಾಸಿ ಮಹಾಂತೇಶ, ಹುಬ್ಬಳ್ಳಿ ಜಂಗಮ ಅಭಿವೃದ್ಧಿ ಸಂಘದ ಕಾರ್ಯದರ್ಶಿಯೂ ಆಗಿದ್ದಾರೆ.

ಜುಲೈನಲ್ಲಿ ದಾನಪತ್ರ: ಕೆಎಲ್‌ಇ ಸಂಸ್ಥೆ ಆರಂಭಿಸಲಿರುವ ವೈದ್ಯಕೀಯ ಕಾಲೇಜಿಗೆ ಡಾ.ಮೂಜಗಂ ಹೆಸರು ಇಡುವ ಷರತ್ತಿನ ಮೇರೆಗೆ ತಾಲ್ಲೂಕಿನ ಗಬ್ಬೂರು ಗ್ರಾಮ ವ್ಯಾಪ್ತಿಯ ಸರ್ವೆ ನಂ 141ರಲ್ಲಿ ಇರುವ ಜಮೀನನ್ನು ಕೆಎಲ್‌ಇ ಸಂಸ್ಥೆಗೆ ಇದೇ ಜುಲೈ 16ರಂದು ದಾನ ನೀಡಲಾಗಿತ್ತು. ಈ ಬಗ್ಗೆ `ಪ್ರಜಾವಾಣಿ~ಯಲ್ಲಿ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಣ ಬಂದಿಲ್ಲ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

`ಮಠದ ಆಸ್ತಿ ಮಾರಾಟ ಮಾಡಬಾರದು ಎಂದು ಯಾವುದೇ ಕಾಯ್ದೆ-ಕಾನೂನು ಇಲ್ಲ. ಉನ್ನತಾಧಿಕಾರ ಸಮಿತಿಯಲ್ಲಿರುವವರು ಮಠದ ಭಕ್ತರೇ ಆಗಿದ್ದಾರೆ. ಅವರು ಸಮಾಜವನ್ನು ಪ್ರತಿನಿಧಿಸುತ್ತಾರೆ. ಅವರ ನಿರ್ಧಾರ ಹಾಗೂ ಹಿರಿಯ ಸ್ವಾಮೀಜಿ ಡಾ.ಮೂಜಗಂ ಅವರ ಇಚ್ಛೆಯಂತೆ ಬಿಡ್ನಾಳದ ಜಮೀನು ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿದ್ದೇವೆ~ ಎಂದು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ  ಪ್ರತಿಕ್ರಿಯಿಸಿದರು.

`ಹೊರಟ್ಟಿಯವರು ಹೇಳಿದಂತೆ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಮಠಕ್ಕೆ ಐದು ಕೋಟಿ ನೀಡುವಂತೆ ಕೆಎಲ್‌ಇ ಸಂಸ್ಥೆಯನ್ನು ಕೇಳಲಾಗಿತ್ತು. ಆದರೆ ಆ ಬಗ್ಗೆ ಸಂಸ್ಥೆಯವರು ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಇಲ್ಲಿಯವ ರೆಗೂ ಮಠಕ್ಕೆ ಹಣ ಬಂದಿಲ್ಲ. ತಮಗೆ ಪತ್ರ ಬರೆದ ಮಹಾಂತೇಶ ಗಿರಿಮಠ ಅವರನ್ನು ಮಠಕ್ಕೆ ಕರೆದು ಜಮೀನು ದಾನವಾಗಿ ನೀಡಬೇಕಾದ ಸನ್ನಿವೇಶವನ್ನು ವಿವರಿಸಿದ್ದೇನೆ. ಮಾಧ್ಯಮದವರು ಇದನ್ನು ವಿವಾದವನ್ನಾಗಿ ಮಾಡುವುದು ಬೇಡ~ ಎಂದರು.

ರೂ 5 ಕೋಟಿ ಕೊಡಿಸಿದ್ದೇನೆ
ಬಿಡ್ನಾಳ ಸಮೀಪದ ಮೂರು ಸಾವಿರ ಮಠದ ಜಮೀನನ್ನು ಕೆಎಲ್‌ಇ ಸಂಸ್ಥೆಗೆ ದಾನವಾಗಿ ನೀಡಿದ್ದಕ್ಕೆ ಪ್ರತಿಯಾಗಿ ಶ್ರೀಮಠಕ್ಕೆ ಸಂಸ್ಥೆಯಿಂದ ಐದು ಕೋಟಿ ಹಣ ಕೊಡಿಸಿದ್ದೇನೆ.  ಹಿರಿಯ ಸ್ವಾಮೀಜಿ ಡಾ.ಮೂಜಗಂ ಇಚ್ಛೆಯಂತೆ ಜಮೀನು ನೀಡಲಾಗಿದೆ. ಅದರಂತೆ ದಾನ ಪತ್ರದ ಮೂಲಕ ಉಚಿತವಾಗಿ ಜಮೀನು ಕೊಡಲು ಮಠದ ಆಡಳಿತ ನಿರ್ಧರಿಸಿತ್ತು. ಆ ಸಂದರ್ಭದಲ್ಲಿ ನಾನು ಮಧ್ಯಪ್ರವೇಶಿಸಿ ಮಠಕ್ಕೆ ಲಾಭವಾಗಲಿ ಎಂದು ಕೆಎಲ್‌ಇ ಸಂಸ್ಥೆಯಿಂದ ಐದು ಕೋಟಿ ಕೊಡಿಸಿದ್ದೇನೆ. ಈ ವಿಚಾರ ಭಕ್ತರಿಗೂ ತಿಳಿಯಬೇಕು. 

ಮಠದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಮೋಹನ ಲಿಂಬಿಕಾಯಿ, ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ  ಹಾಜರಿದ್ದ ನಾನು ಮಠಕ್ಕೆ ಐದು ಕೋಟಿ ರೂಪಾಯಿ ಕೊಡಿಸುವಂತೆ ಪಟ್ಟು ಹಿಡಿದಿದ್ದು, ಅದೇ ಕಾರಣಕ್ಕೆ ಕೆಎಲ್‌ಇ ಸಂಸ್ಥೆಯ ನಿಷ್ಠುರ ವನ್ನೂ ಕಟ್ಟಿಕೊಳ್ಳಬೇಕಾ ಯಿತು.
ಬಸವರಾಜ ಹೊರಟ್ಟಿ, ಮಾಜಿ ಸಚಿವ, ಮಠದ ಉನ್ನತಾಧಿಕಾರ ಸಮಿತಿ ಸದಸ್ಯ

ದಾನ ನೀಡಿದ್ದಾಗಿ ಹೇಳಿದ್ದರು...
ಪತ್ರ ಬರೆದ ನಂತರ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನನ್ನನ್ನು ಮಠಕ್ಕೆ ಕರೆಸಿದ್ದರು. ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಡಾ.ಮೂಜಗಂ ಇಚ್ಛೆಯಂತೆ ಕಾಲೇಜಿಗೆ ಅವರ ಹೆಸರು ಇಡುವ ಷರತ್ತಿನೊಂದಿಗೆ ಜಮೀನನ್ನು ದಾನವಾಗಿ ನೀಡಲಾಗಿದೆ. ಉನ್ನತ ಸಮಿತಿಯ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಮಹಾಂತೇಶ ಗಿರಿಮಠ, ವಿಎಚ್‌ಪಿ ನಗರ ಜಂಟಿ ಕಾರ್ಯದರ್ಶಿ

 ಹಣದ ವ್ಯವಹಾರ ಗೊತ್ತಿಲ್ಲ...
ಹಣದ ವ್ಯವಹಾರ ತಮಗೆ ತಿಳಿದಿಲ್ಲ. ಉನ್ನತಾಧಿಕಾರ ಸಮಿತಿ ಅಧ್ಯಕ್ಷನಾಗಿ ಕೈತಪ್ಪಿ ಹೋಗಿದ್ದ ಮಠದ ಬಹಳಷ್ಟು ಆಸ್ತಿ ಉಳಿಸಿದ್ದೇನೆ. ಹಿಂದಿನ ಶ್ರೀಗಳ ಇಚ್ಛೆಯಂತೆ ಕೆಎಲ್‌ಇ ಸಂಸ್ಥೆಯೊಂದಿಗೆ ವ್ಯವಹರಿಸಲಾಗಿದೆ.
ಮೋಹನ ಲಿಂಬಿಕಾಯಿ, ಮಠದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ

ಮೂಜಗಂ ಹೆಸರು ಇಡುತ್ತೇವೆ
ಕೆಎಲ್‌ಇ ಸಂಸ್ಥೆ ಬಿಡ್ನಾಳದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 100 ಕೋಟಿ ರೂಪಾಯಿ ವ್ಯಯಿ ಸುತ್ತಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಕಾಲೇಜು ನಿರ್ಮಾಣ ತಡವಾಗಿದೆ. ವೈದ್ಯಕೀಯ ಸಂಸ್ಥೆಗೆ ಡಾ. ಮೂಜಗಂ ಅವರ ಹೆಸರಿಟ್ಟು, ಮಠದ ಭಕ್ತರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಜಮೀನು ಪಡೆಯುವಾಗ ಒಪ್ಪಿಕೊಳ್ಳಲಾಗಿದೆ. ಹಣದ ವ್ಯವಹಾರ ನಡೆದಿಲ್ಲ.
ಶಂಕರಣ್ಣ ಮುನವಳ್ಳಿ, ಕೆಎಲ್‌ಇ ಸಂಸ್ಥೆ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT