ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಚಿಕ್ಕಬಳ್ಳಾಪುರ: ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಮ್ಮ ಸ್ವಗ್ರಾಮ ಪೆರೇಸಂದ್ರದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ತಂದೆ ಕೇಶವರೆಡ್ಡಿ, ಪತ್ನಿ ಡಾ.ಪ್ರೀತಿ ಸಹ ಜೊತೆಯಲ್ಲಿ ಇದ್ದರು. ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್, ಕಳೆದ ಮೂರು ವಾರದಿಂದ ಹಗಲಿರುಳು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಮಡಿಕೇರಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದೆ.
ಇಲ್ಲಿನ ಅನೇಕ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯಗಳು ಕಂಡು ಬಂದವು.
ಕೆಲವು ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದರು.
ಮೈಸೂರು: ಇಲ್ಲಿನ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕೇರ್ಗಳ್ಳಿ ಶಾಲಾ ಮತಗಟ್ಟೆಯಲ್ಲಿ ಮತದಾರರ ಸಹಾಯಕ್ಕೆ ಶಾಲಾ ಮಕ್ಕಳನ್ನು ನಿಲ್ಲಿಸಿದ್ದು ಕಂಡು ಬಂತು. ಶಾಲೆಯಲ್ಲಿ ಎರಡು ಮತಗಟ್ಟೆಗಳಿದ್ದು, ಶಾಲೆಯ ಮುಖ್ಯ ಗೇಟ್ ಬಳಿ ನಿಂತಿದ್ದ ಬಾಲಕರು, ಮತದಾರರ ಭಾಗದ ಸಂಖ್ಯೆಯನ್ನು ಕೇಳಿ ಮತಗಟ್ಟೆಯ ಬಳಿಗೆ ಕಳಿಸುತ್ತಿದ್ದರು. ಗ್ರಾಮದಲ್ಲೇ ಮನೆ ಇದ್ದು, ನಿನ್ನೆಯಿಂದಲೇ ತಾವು ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.
ಮೈಸೂರು: ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರು
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಮ್ಮ ಸ್ವಗ್ರಾಮ ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರದ ಗ್ರಾಮ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.
ಅವರ ಪತ್ನಿ ಲಲಿತಾ ಕೂಡ ಮತ ದಾನ ಮಾಡಿದರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕವೀರ ಸೋಮೇಶ್ವರ ಸ್ವಾಮೀಜಿ ಮತದಾನ ಮಾಡಿದರು.
ಬಾಳೆಹೊನ್ನೂರಿನ ರಂಭಾಪುರಿ ಮಠದ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಮತಗಟ್ಟೆಗೆ ಬೆಳಿಗ್ಗೆಯೇ ತೆರಳಿದ ಸ್ವಾಮೀಜಿ, ಮತದಾನ ಮಾಡಿದರು. ‘ಮತದಾನ ಮಾಡುವುದು ಸಂವಿಧಾನ ನೀಡಿದ ಪವಿತ್ರ ಹಕ್ಕು. ಮತ ಚಲಾವಣೆ ಮತದಾರರ ಪವಿತ್ರ ಕರ್ತವ್ಯ. ಎಲ್ಲರೂ ಮತದಾನ ಮಾಡಬೇಕು’ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲೆಡೆ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಗಟ್ಟೆ ಬಳಿ ಸಾಲುಗಟ್ಟಿದ್ದಾರೆ. ಯುವಕರು, ವಯೋವೃದ್ಧರು ಸೇರಿ ಮತದಾನ ಮಾಡುತ್ತಿದ್ದಾರೆ.
ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಬೆಂಗಳೂರಿನ ಆರ್.ಆರ್ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.
ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜರಕಾಡು ಮತಗಟ್ಟೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಹಿತ 10 ಮಂದಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 7,68,215 ಪುರುಷರು, 8,16,910 ಮಹಿಳಾ ಮತದಾರರು ಹಾಗೂ 37 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 15,85,162 ಮತದಾರರು ಇದ್ದಾರೆ. 1,842 ಮತಗಟ್ಟೆಗಳನ್ನು ತೆರೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 202, ಉಡುಪಿ ಜಿಲ್ಲೆಯಲ್ಲಿ 203 ಸೂಕ್ಷ್ಮ ಮತಗಟ್ಟೆಗಳಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 52 ಮತಗಟ್ಟೆಗಳಿಗೆ ಸಿಎಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. 1,270 ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕೆ ತಲಾ 1,030 ಬಿಆರ್ಒ, ಎಪಿಆರ್ಒ ಹಾಗೂ 2,060 ಪಿಒಗಳನ್ನು ನಿಯೋಜಿಸಲಾಗಿದೆ.ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ಮತ ಚಲಾವಣೆ
ಸುಳ್ಯ (ದಕ್ಷಿಣ ಕನ್ನಡ): ತಾಲ್ಲೂಕಿನ ಗುತ್ತಿಗಾರು ಗ್ರಾಮದ ಮೊಗ್ರಾ ಎಂಬಲ್ಲಿ ಇವಿಎಂ ಕೈಕೊಟ್ಟ ಕಾರಣ ಮತದಾನ ಪ್ರಕ್ರಿಯೆ ಆರಂಭ ವಿಳಂಬವಾಯಿತು.
ಮತದಾರರು ತಮ್ಮ ಹಕ್ಕು ಚಲಾಯಿಸಲು ಬೆಳಿಗ್ಗೆ 7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಆದರೆ, ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ
ಬೆಳಿಗ್ಗೆ 7.45ರ ವರೆಗೂ ಮತದಾನ ಪ್ರಕ್ರಿಯೆ ಆರಂಭವಾಗಿಲ್ಲ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಒಂದು ಮತ ಚಲಾವಣೆ ಆಗುತ್ತಿದ್ದಂತೆ ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ನಂತರ ವಿವಿ ಪ್ಯಾಟ್ ಅನ್ನು ಬದಲಾಯಿಸಲಾಯಿತು.
ಮಂಗಳೂರು ಉತ್ತರ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಕೂಡ ಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದ ಮತದಾನ ಆರಂಭವಾಗಲು ವಿಳಂಬವಾಯಿತು.