ಮಹಾಲಿಂಗಪುರ: ನಗರದ ಆರಾಧ್ಯ ದೈವ ಮಹಾಲಿಂಗೇಶ್ವರರ ಜಾತ್ರಾ ಮಹೋತ್ಸದ ನಿಮಿತ್ತ ಹಮ್ಮಿಕೊಳ್ಳುವ ರಾಷ್ಛ್ಟ್ರಮಟ್ಟದ ಜಂಗೀ ಕುಸ್ತಿ ಪಂದ್ಯಾಟಗಳು ದೇಶ ವಿದೇಶಗಳ ಕುಸ್ತಿಪಟುಗಳ ಗಮನ ಸೆಳೆದಿವೆ. ಶತಮಾನಗಳಿಂದ ನಡೆದುಕೊಂಡು ಬಂದಿರುವ ತುರಸಿನ ಈ ಕುಸ್ತಿ ಪಂದ್ಯಾಟ ನೋಡಲು ದೂರ ದೂರದ ಊರುಗಳಿಂದ ಜನಸಾಗರವೇ ಹರಿದು ಬರುವುದು ಜಾತ್ರೆಯ ಒಂದು ದೊಡ್ಡ ಆಕರ್ಷಣೆಯಾಗಿದೆ.
ಇಲ್ಲಿಯ ಸಿದ್ಧ ಸಂಸ್ಥಾನಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಸ್ವಾಮೀಜಿ ಅವರು ನಗರದ ಬಸ್ ನಿಲ್ದಾಣದ ಪಕ್ಕದ ಪುರಸಭೆ ಮೈದಾನದಲ್ಲಿ ಕುಸ್ತಿ ಪಂದ್ಯಾಟಗಳಿಗೆ ಚಾಲನೆ ನೀಡಿದರು. ಆರಂಭದಲ್ಲಿ ಹೊಸದಿಲ್ಲಿ ಪೈಲ್ವಾನ ಅಮರ ಸೋನಿಯನ್ನು ಚಿತ್ ಕೆಡವಿದ ಮುಧೋಳದ ಪೈಲ್ವಾನ ಪ್ರಕಾಶ ಗೆಲುವಿನ ನಗೆ ಬೀರಿದರು. ಕೊಲ್ಹಾಪುರದ ರಾಹುಲ್ ಸಿಂಧೆಯವರನ್ನು ಮಹಾಲಿಂಗಪುರದ ಸಿದ್ದಪ್ಪ, ಕೊಲ್ಹಾಪುರದ ಜಿತೇಂದ್ರ ಕದಂಬರನ್ನು ಸುಡಕೇದ ಸಂಭಾ ಹಾಗೂ ಅದೇ ಊರಿನ ಯೋಗೀಶ ಪಾಟೀಲರನ್ನು ಮುಗಳಖೋಡ ಹಾಲಪ್ಪ ಚಿತ್ತ ಕೆಡವಿ ಜಯ ತಮ್ಮದಾಗಿಸಿಕೊಂಡರು.
ಜಾತ್ರಾ ಮಹೋತ್ಸವ ಕಮಿಟಿ ಅಧ್ಯಕ್ಷ ಲಕ್ಷಣಗೌ ಪಾಟೀಲ, ಬಿಜೆಪಿ ನಾಯಕ ಬಸನಗೌಡ ಪಾಟೀಲ, ಎಸ್.ಐ. ಆರ್.ಆರ್.ಪಾಟೀಲ, ಪಾಂಡಪ್ಪ ಹುದ್ದಾರ, ಪುರಸಭೆ ಸದಸ್ಯ ಶಿವಲಿಂಗ ಘಂಟಿ, ಪುರಸಭೆ ಅಧ್ಯಕ್ಷ ಪ್ರಕಾಶ ಅರಳೀಕಟ್ಟಿ, ಉಪಾಧ್ಯಕ್ಷ ಚನಬಸು ಹುರಕಡ್ಲಿ, ಜಿಲ್ಲಾ ಕೆ.ಎಂ.ಎಫ್ ನಿರ್ದೇಶಕ ರಂಗನಗೌಡ ಪಾಟೀಲ, ಜಿಲ್ಲಾ ಯುವ ಬಿಜೆಪಿ ನೇಕಾರ ಮೋರ್ಚಾದ ಅಧ್ಯಕ್ಷ ಮನೋಹರ ಶಿರೋಳ, ಯೋಗಪ್ಪ ಸವದಿ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾಲಿಂಗಪ್ಪ ತಟ್ಟಿಮನಿ, ರನ್ನ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಶೋಕಗೌಡ ಪಾಟೀಲ ಉಪಸ್ಥಿತರಿದ್ದರು. ವಿವಿಧ ರಾಜ್ಯಗಳಿಂದ ಅನೇಕ ಕುಸ್ತಿಪಟುಗಳು ಭಾಗವಹಿಸಿದ್ದರು. ನಂತರ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.