ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಹುಬ್ಬಳ್ಳಿ ಹಾಗೂ ಸಮೀಪದ ವಿವಿಧ ಗ್ರಾಮಗಳಲ್ಲಿ ಆಯೋಜಿ ಸಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಈ ಸಂದರ್ಭ ನೂರಾರು ಮಂದಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಹುಬ್ಬಳ್ಳಿಯ ತಬೀಬ್ಲ್ಯಾಂಡ್, ಬಿಡ್ನಾಳ, ಜೋಳದ ಓಣಿ, ಯಲ್ಲಾಪುರ ಓಣಿಗಳಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ನಡೆದವು. `ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ದೇಶವನ್ನು ಆಳಿದ್ದರೂ ಸಮಾಜದ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಿಲ್ಲ. ಈಗ ಬದಲಾವಣೆಗಾಗಿ ನಮ್ಮಂದಿಗೆ ಕೈಜೋಡಿಸಿ ಎಂದು ಕೊಂಡು ಕಾರ್ಯಕ್ರಮ ಹಮ್ಮಿಕೊಂಡಿರುವುದರ ಉದ್ದೇಶವಾದರೂ ಏನು~ ಎಂದು ಅವರು ಪ್ರಶ್ನಿಸಿದರು.
`ಬಿಜೆಪಿ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೂ ಯಾವುದೇ ಕೆಲಸ ಮಾಡಿಲ್ಲ. ವೃದ್ಧಾಪ್ಯ ವೇತನಾ, ವಿಧವಾ ವೇತನಾ ಸೇರಿದಂತೆ ಜನರಿಗೆ ತಲುಪಬೇಕಾದ ಎಲ್ಲ ಯೋಜನೆಗಳು ಬಂದ್ ಆಗಿವೆ~ ಎಂದು ಅವರು ಆರೋಪಿಸಿದರು. ಉತ್ತಮ ಆಡಳಿತಕ್ಕಾಗಿ ಜೆಡಿಎಸ್ ಜೊತೆ ಕೈ ಜೋಡಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ಪಿ.ಸಿ. ಸಿದ್ದನಗೌಡ್ರ, ಹನುಮಂತಪ್ಪ ಆಲ್ಕೋಡ್, ಇಸ್ಮಾಯಿಲ್ ಕಾಲೇಬುಡ್ಡೆ, ಎಂ.ಎಚ್. ಕೋನರಡ್ಡಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ, ತಬರೀಶ, ಜಾವೂಸ್ ಜೊತೆಗಿದ್ದರು.