ಸೋಮವಾರಪೇಟೆ: ಜೇನು ಕೃಷಿಕರ ನಾಡು ಎಂದೇ ಹೆಸರುಗಳಿಸಿದ್ದ ಸೋಮ ವಾರಪೇಟೆ ತಾಲೂಕಿನ ಪುಷ್ಪಗಿರಿ ತಪ್ಪಲಿ ನಲ್ಲಿರುವ ಗ್ರಾಮಗಳಲ್ಲಿ ಜೇನ್ನೊಣಗಳಿಗೆ ಮಾರಕ ರೋಗ ತಗುಲಿದ್ದು, ಕೋಶಾ ವಸ್ಥೆಯಲ್ಲಿರುವ ಜೇನು ಹುಳುಗಳು ಜೇನು ಪಟ್ಟಿಗೆಯಲ್ಲೇ ಸಾಯುತ್ತಿವೆ. ಇದ ರಿಂದ ಅಲ್ಲಿನ ಜೇನು ಕೃಷಿಕರು ಆತಂಕ ಗೊಂಡಿದ್ದಾರೆ.
ಸೋಮವಾರಪೇಟೆಯಿಂದ 30 ಕಿ.ಮೀ. ದೂರದಲ್ಲಿರುವ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಇನಕನಹಳ್ಳಿ, ಬಾಚಳ್ಳಿ, ಬೆಟ್ಟದಕೊಪ್ಪ, ಕುಮಾರಳ್ಳಿ, ಹೆಗ್ಗಡಮನೆ, ಹಂಚಿನಳ್ಳಿ, ಕೊತ್ತನಳ್ಳಿ, ಬೀದಳ್ಳಿ, ಮಲ್ಲಳ್ಳಿ, ಜಕ್ಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ಜೇನು ಸಂತತಿಗೆ ಮಾರಕರೋಗ ತಗುಲಿದೆ.
ಪೆಟ್ಟಿಗೆಯಲ್ಲಿ ರೋಗಬಾಧೆಯಿಂದ ಕೋಶಾವಸ್ಥೆಯಲ್ಲಿರುವ ಜೇನು ಹುಳು ಗಳು ಪೆಟ್ಟಿಗೆಯಲ್ಲೇ ಸತ್ತು ಹೋಗುತ್ತಿ ರುವ ಕಾರಣ, ಸತ್ತ ಜೇನು ಹುಳುಗಳ ವಾಸನೆಯಿಂದ ಜೇನ್ನೊಣ ಗಳು ಸಾಮೂಹಿಕವಾಗಿ ಹಾರಿ ಹೋಗು ತ್ತಿರುವುದರಿಂದ ಜೇನು ಪೆಟ್ಟಿಗೆಗಳು ಖಾಲಿಯಾಗುತ್ತಿವೆ.
ಅರಣ್ಯದಿಂದ ಹರಸಾಹಸ ಮಾಡಿ ಜೇನ್ನೊಣಗಳನ್ನು ಪೆಟ್ಟಿಗೆಗಳಲ್ಲಿ ಸಂಗ್ರಹಿಸಿ, ಮನೆಯ ಸುತ್ತಮುತ್ತ ಇಟ್ಟು ಜೇನು ಕೃಷಿಯಲ್ಲಿ ತೊಡಗಿದ್ದವರಿಗೆ, ಇಂತಹ ಮಾರಕರೋಗ ಆಘಾತ ವನ್ನುಂಟು ಮಾಡಿದೆ. ಜೇನ್ನೊಣಗಳಿಗೆ ಬಾಧಿಸುತ್ತಿರುವ ಮಾರಕ ರೋಗ ಯಾವುದೆಂದು ತಿಳಿಯದ ಕೃಷಿಕರು ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ.
1993ರಲ್ಲಿ ಇದೇ ತರಹದ ರೋಗ ಕಾಣಿಸಿಕೊಂಡು ಜೇನು ಕೃಷಿಯಿಂದ ನಷ್ಟ ಅನುಭವಿಸಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ. ಈ ವರ್ಷ ದಿಢೀರ್ ಮಾರಕ ರೋಗ ಕಾಣಿಸಿಕೊಂಡಿದ್ದು, ಇನಕನಹಳ್ಳಿ ಗ್ರಾಮವೊಂದರಲ್ಲೇ ಒಂದು ಸಾವಿರದಷ್ಟು ಜೇನು ಪೆಟ್ಟಿಗೆಯಿಂದ ಜೇನ್ನೊಣಗಳು ವಲಸೆ ಹೋಗಿವೆ. ಜೇನು ತುಪ್ಪ ಉತ್ಪಾದನೆ ಕಡಿಮೆಯಾಗುವ ಎಲ್ಲ ಸೂಚನೆಗಳು ಕಂಡು ಬರುತ್ತಿವೆ .
ಪುಷ್ಪಗಿರಿ ತಪ್ಪಲಿನಲ್ಲಿರುವ ಎಲ್ಲ ಗ್ರಾಮಗಳಲ್ಲೂ ಜೇನು ಕೃಷಿಗೆ ಪೂರಕ ವಾದ ವಾತಾವರಣವಿದ್ದು, ಗ್ರಾಮಗಳ ಸುತ್ತಮುತ್ತ ಒಳ್ಳೆಯ ಪರಿಸರವಿದೆ. ಇಲ್ಲಿ ವಾರ್ಷಿಕವಾಗಿ 300 ಇಂಚಿನಷ್ಟು ಮಳೆ ಆಗುತ್ತದೆ.
ಇಲ್ಲಿನ ರೆೃತರು ಬತ್ತ, ಏಲಕ್ಕಿ, ಕಾಫಿ ಕೃಷಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಿದರೂ, ಕಳೆದ 6 ದಶಕಗಳಿಂದಲೂ ಜೇನು ಕೃಷಿಯನ್ನು ಮುಂದುವರಿಸುತ್ತ ಬಂದಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಯಿಂದ ಬೆಳೆ ನಾಶವಾದ ಸಂದರ್ಭಗಳಲ್ಲಿ ಕೃಷಿಕರ ಆರ್ಥಿಕ ರಕ್ಷಣೆ ಮಾಡಿದ್ದೇ ಜೇನು ಕೃಷಿ ಎಂಬುದು ಕೃಷಿಕರ ಅಭಿಪ್ರಾಯ.
ಇನಕನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ಉತ್ತಯ್ಯ ಎಂಬುವರ ಕುಟುಂಬ ಕೂಡ ಕಳೆದ 60 ವರ್ಷಗಳಿಂದಲೂ ಜೇನು ಕೃಷಿ ಮಾಡುತ್ತ ಬಂದಿದೆ. 1985 ರಲ್ಲಿ ಕೇವಲ 50 ಜೇನು ಪೆಟ್ಟಿಗೆ ಗಳಲ್ಲಿ 900 ಕೆ.ಜಿ. ಜೇನು ತುಪ್ಪ ಉತ್ಪಾದಿಸಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ದಾಖಲೆಯಿದೆ.
ಈ ವರ್ಷ ಉತ್ತಯ್ಯ 150 ಜೇನು ಪೆಟ್ಟಿಗೆಯಲ್ಲಿ ಕೃಷಿ ಮಾಡುತ್ತಿದ್ದು, ಈಗಾಗಲೇ 125 ಜೇನು ಪೆಟ್ಟಿಗೆಗೆ ರೋಗ ತಗುಲಿದ್ದು, ಜೇನುಹುಳುಗಳು ಸಾಮೂಹಿಕವಾಗಿ ಹಾರಿ ಹೋಗಿವೆ. ಇದೇ ಗ್ರಾಮದ ಎನ್. ಡಿ.ಸೋಮಯ್ಯ, ಎಸ್.ಕೆ.ಈರಪ್ಪ, ಜಕ್ಕನಹಳ್ಳಿ ಗ್ರಾಮದ ಎಸ್.ಎಸ್. ಜೋಯಪ್ಪ, ಎಸ್.ಕೆ. ಚಂಗಪ್ಪ, ಕುಮಾ ರಳ್ಳಿ ಗ್ರಾಮದ ಕೆ.ಡಿ. ಈರಪ್ಪ. ಕೆ.ಟಿ. ಶಾಂತಪ್ಪ ನಷ್ಟ ಅನಿಭವಿಸಿದ್ದಾರೆ.ರೋಗ ನಿಯಂತ್ರಣಕ್ಕೆ ಯಾವುದೇ ಔಷಧಿಗಳು ಇಲ್ಲದ ಕಾರಣ ಉಳಿದ ಪೆಟ್ಟಿಗೆಗಳಿಗೂ ರೋಗ ಹರಡಬಹುದು ಎಂಬ ಆತಂಕದಲ್ಲಿದ್ದಾರೆ.
ಒಂದು ಜೇನು ಪೆಟ್ಟಿಗೆಯಿಂದ ವಾರ್ಷಿಕ 2 ರಿಂದ 3 ಸಾವಿರ ರೂಪಾಯಿ ಆದಾಯ ಗಳಿಸಬಹುದು. ಉತ್ಪಾದನಾ ವೆಚ್ಚ ಕೂಡ ಕಡಿಮೆ. ಆದರೆ ಕಾಡಿನಲ್ಲಿ ಜೇನ್ನೊಣ ಸಂತತಿ ಕಡಿಮೆ ಆಗಿದೆ. ಮಾರಕ ರೋಗಗಳು ಸಂತತಿ ನಶಿಸುವುದಕ್ಕೆ ಕಾರಣವಿರ ಬಹುದು ಎಂದು ಪ್ರಗತಿಪರ ಜೇನು ಕೃಷಿಕ ಉತ್ತಯ್ಯ ಅಭಿಪ್ರಾಯಪಡುತ್ತಾರೆ.
ಬೆಳೆಗಳಿಗೆ ಕೀಟ ನಾಶಕ ಸಿಂಪಡಿಸಿದ ಹೂಗಳ ಮೇಲೆ ಮಕರಂದ ಹೀರಲು ಜೇನ್ನೊಣ ಹೋಗುವುದರಿಂದ ಅಲ್ಲಿ ಸತ್ತು ಹೋಗುವ ಸಂಭವವಿದೆ. ವಾತಾ ವರಣದ ಅಸಮತೋಲನ ಕೂಡ ಜೇನು ಹುಳು ಸಂತತಿ ನಾಶವಾಗುತ್ತಿರುವುದಕ್ಕೆ ಕಾರಣವಿರಬಹುದು ಎನ್ನುತ್ತಾರೆ.
ಈಗಾಗಲೇ ಬೆಟ್ಟದಳ್ಳಿ ಗ್ರಾಮ ಪಂಚಾ ಯಿತಿ ಹಾಗು ತಹಶೀಲ್ದಾರಿಗೆ ಮನವಿ ಸಲ್ಲಿಸಲಾಗಿದೆ. ಜೇನು ಕೃಷಿಗೆ ಮಾರಕ ವಾಗಿರುವ ರೋಗಬಾಧೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಉತ್ತಯ್ಯ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.