ಗುಲ್ಬರ್ಗ: ಅನುಕಂಪದ ಆಧಾರದ ಮೇಲೆ ನೌಕರಿ ಆದೇಶ ನೀಡುವಾಗ ನಿಯಮ ಉಲ್ಲಂಘಿಸಿದ್ದನ್ನು ಪರಿಗಣಿಸಿ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠವು ಈ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ, ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಕಾರ್ಯದರ್ಶಿಯಾಗಿರುವ ಡಾ. ಶಾಲಿನಿ ರಜನೀಶ್ ಸೇರಿ ಇಬ್ಬರು ಅಧಿಕಾರಿಗಳಿಗೆ ರೂ. 10 ಸಾವಿರ ದಂಡ ವಿಧಿಸಿದೆ.
`ನಿಯಮಗಳನ್ನು ಗಮನಿಸದೆ ತಮಗೆ ಸರಿ ಕಂಡಿದ್ದನ್ನು ಅನುಷ್ಠಾನಗೊಳಿಸಲು ಮುಂದಾಗುವುದು ಸರ್ಕಾರಿ ನೌಕರನ ಕಾರ್ಯವಲ್ಲ. ಇಬ್ಬರು ಅಧಿಕಾರಿಗಳು ಈ ರೀತಿ ಮಾಡಿರುವುದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ~ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಡಿ.ವಿ.ಶೈಲೇಂದ್ರಕುಮಾರ, ಎಚ್.ಎಸ್. ಕೆಂಪಣ್ಣ ಆದೇಶದಲ್ಲಿ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಆರ್ಜಿ ಸಲ್ಲಿಸಿದ್ದ ಅಭ್ಯರ್ಥಿಯು ತಂದೆ ಮೃತಪಟ್ಟ ಒಂದು ವರ್ಷದೊಳಗೆ ಪ್ರಾಪ್ತ ವಯಸ್ಸು ಆಗಿರಲಿಲ್ಲ ಎನ್ನುವುದನ್ನು ಆಧಾರವಾಗಿ ಇಟ್ಟುಕೊಂಡು ಸಂಚಾರಿ ಪೀಠವು ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇದೇ ವೇಳೆ ಕೈ ಬಿಟ್ಟಿತು.