ನವದೆಹಲಿ (ಪಿಟಿಐ): ದ್ವಿದಳ ಧಾನ್ಯಗಳು, ಅಡುಗೆ ಎಣ್ಣೆಗಳು ಮತ್ತು ಎಣ್ಣೆ ಬೀಜಗಳ ಮೇಲಿನ ದಾಸ್ತಾನು ಪ್ರಮಾಣಕ್ಕೆ ವಿಧಿಸಿದ್ದ ಮಿತಿಯನ್ನು ಇನ್ನೊಂದು ವರ್ಷ ಅವಧಿಯವರೆಗೆ ವಿಸ್ತರಿಸಲಾಗಿದೆ.
ಇವುಗಳ ಜನರಿಗೆ ಸುಲಭವಾಗಿ ಸಿಗುವಂತಾಗಬೇಕು ಹಾಗೂ ಬೆಲೆ ಕೂಡ ಹತೋಟಿಯಲ್ಲಿರಬೇಕೆಂಬ ಉದ್ದೇಶದಿಂದ ಕೇಂದ್ರ ಸಂಪುಟವು ಶುಕ್ರವಾರ ಈ ನಿರ್ಧಾರ ತೆಗೆದುಕೊಂಡಿತು.
ಈಗ ಕೂಡ ಈ ಸಾಮಗ್ರಿಗಳ ದಾಸ್ತಾನಿನ ಮೇಲೆ ಮಿತಿ ಜಾರಿಯಲ್ಲಿದ್ದು, ಅದರ ಅವಧಿ ಸೆ.30ರಂದು ಕೊನೆಯಾಗುತ್ತದೆ. ಸರ್ಕಾರದ ನಿರ್ಧಾರ ಸೆ.30ರಿಂದ ಒಂದು ವರ್ಷ ಅವಧಿಗೆ ಅನ್ವಯವಾಗುತ್ತದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಹೇಳಿದರು.
ಕೇಂದ್ರದ ಈ ನಿರ್ಧಾರದಿಂದಾಗಿ, ಮಿತಿಗಿಂತ ಹೆಚ್ಚು ದಾಸ್ತಾನು ಸಂಗ್ರಹಿಸುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ–1955ರ ಅಡಿ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಗಳಿಗೆ ಇರಲಿದೆ.
ದಾಸ್ತಾನು ಪ್ರಮಾಣದ ಮೇಲೆ ಮಿತಿ ವಿಧಿಸಿರುವುದರಿಂದ ಬೆಲೆ ನಿಯಂತ್ರಣ ವಾಗಿದೆ. ಕಳೆದ ವರ್ಷ ದೆಹಲಿಯಲ್ಲಿ ಆಹಾರಧಾನ್ಯಗಳಿಗೆ ಕೆ.ಜಿ.ಯೊಂದಕ್ಕೆ ಸರಾಸರಿ ಬೆಲೆ ರೂ 62–78 ರೂಪಾಯಿ ಇದ್ದುದು ಈಗ ಕೆ.ಜಿ.ಯೊಂದಕ್ಕೆ ರೂ 54–79 ರೂಪಾಯಿ ಇದೆ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈಗ ಶೇಂಗಾ ಎಣ್ಣೆ ಬೆಲೆ ಕೆ.ಜಿ.ಗೆ ₨ 167 ಇದ್ದರೆ, ಸಾಸಿವೆ ಎಣ್ಣೆ ಬೆಲೆ ಕೆ.ಜಿ.ಗೆ ರೂ100 ಇದೆ.