ಬೆಂಗಳೂರು: `ನನ್ನ ಬಂಧನದಿಂದ ಪಕ್ಷದಲ್ಲಿ ಕೆಲವರಿಗೆ ಖುಷಿಯಾಗಿದೆ. ಅವರೆಲ್ಲ ಹಬ್ಬ ಆಚರಿಸುತ್ತಿದ್ದಾರೆ. ಇದು ನನಗೆ ತುಂಬ ಬೇಸರ ತಂದಿದೆ~- ಹೀಗೆ ತಮ್ಮ ನೋವನ್ನು ತೋಡಿಕೊಂಡಿದ್ದು ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ತಮ್ಮನ್ನು ನೋಡಲು ಹೋದ ಪಕ್ಷದ ಮುಖಂಡರ ಜತೆ ಈ ರೀತಿ ದುಃಖ ತೋಡಿಕೊಂಡಿದ್ದಾರೆ.
`ಪಕ್ಷದಲ್ಲಿನ ನನ್ನ ವಿರೋಧಿಗಳು ಪಕ್ಷಕ್ಕಾಗಿ ಎಂದೂ ದುಡಿಯಲಿಲ್ಲ. ಆದರೆ, ಅಧಿಕಾರ ಮಾತ್ರ ಅನುಭವಿಸಿದರು. 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ರಾಜ್ಯ ಸುತ್ತಿದ್ದೇನೆ. ಇದ್ಯಾವುದನ್ನೂ ಲೆಕ್ಕಿಸದ ಕೆಲವರು ನನ್ನ ಬಂಧನದ ಸುದ್ದಿ ಕೇಳಿದ ತಕ್ಷಣ ಸಂಭ್ರಮಿಸಿದ್ದಾರೆ. ನಾನೇನು ಅಂತಹ ತಪ್ಪು ಮಾಡಿದ್ದೇನೆ~ ಎಂದು ನೋವು ತೋಡಿಕೊಂಡರು ಎನ್ನಲಾಗಿದೆ.
`ಆಪರೇಷನ್ ಕಮಲ~ದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಅದು ಮಾಡದೆ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕಿತ್ತು. ಸರ್ಕಾರ ಉಳಿಸುವುದು ನನಗೊಬ್ಬನಿಗೆ ಮಾತ್ರ ಬೇಕಿತ್ತೇ? ಬೇರೆ ಯಾರಿಗೂ ಬೇಕಿರಲಿಲ್ಲವೇ ಎಂದೂ ಪ್ರಶ್ನಿಸಿದರು ಎಂದು ಗೊತ್ತಾಗಿದೆ. ಸರ್ಕಾರ ಉಳಿಸುವ ಕಾರ್ಯತಂತ್ರದಲ್ಲಿ ರಾಷ್ಟ್ರೀಯ ನಾಯಕರು ಕೂಡ ಭಾಗವಹಿಸಿದ್ದರು. ಅವರು ಕೂಡ ಈ ಎಲ್ಲ ಘಟನಾವಳಿಗಳಿಗೆ ಕಾರಣರಲ್ಲವೆ ಎಂದೂ ಪ್ರಶ್ನಿಸಿದರು.`ಖಾಸಗಿ ದೂರಿನ ಮೇಲೆ ನ್ಯಾಯಾಲಯ ನನ್ನನ್ನು ಜೈಲಿಗೆ ಹಾಕಿದೆ. ದೇಶದಲ್ಲೇ ಮೊದಲ ಪ್ರಕರಣ ಇದು. ಇದರ ನಂತರ ಬಂಧನ ವಾರೆಂಟ್ ಜಾರಿಯಾಗುವ ಮುನ್ನವೇ ಪೋಲೀಸರು ನನ್ನನ್ನು ಬಂಧಿಸಲು ನನ್ನ ಮನೆಗೆ ಹೋದರು. ಇಷ್ಟು ವರ್ಷ ರಾಜ್ಯಕ್ಕಾಗಿ ದುಡಿದ ನನಗೆ ಇದೆಂಥ ಘೋರ ಶಿಕ್ಷೆ~ ಎಂದು ಯಡಿಯೂರಪ್ಪ ನೋವು ತೋಡಿಕೊಂಡರು ಎನ್ನಲಾಗಿದೆ.