ಹೊಸದುರ್ಗ: ಚುನಾವಣಾ ನೀತಿ ಸಂಹಿತೆ ವೇಳೆಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಹಶೀಲ್ದಾರ್ ಈ. ಬಾಲಕೃಷ್ಣಪ್ಪ ತಿಳಿಸಿದರು.
ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ್ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ನೀತಿಸಂಹಿತೆ ಜಾರಿಯಲ್ಲಿ ಇರುವುದರಿಂದ ಡಾ.ಬಾಬು ಜಗಜೀವನ್ರಾಮ್ರ ಜಯಂತಿಯನ್ನು ಏ. 5ರಂದು ವಿವಿಧ ಕಚೇರಿಗಳಲ್ಲಿ ಮುಖ್ಯಸ್ಥರ ನೇತೃತ್ವದಲ್ಲಿ ಆಚರಿಸುವುದು. ಹಾಗೆಯೇ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಏ. 14ರಂದು ಮೊದಲಿಗೆ ಶಾಲಾ-ಕಾಲೇಜು ಹಾಗೂ ವಿವಿಧ ಕಚೇರಿಗಳಲ್ಲಿ ಆಚರಿಸಿ ನಂತರ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುವ ಸಮಾರಂಭಕ್ಕೆ ತಪ್ಪದೇ ಆಗಮಿಸಬೇಕು ಎಂದು ಹೇಳಿದರು.
ಈ ಸಮಾರಂಭಕ್ಕೆ ಯಾವುದೇ ರಾಜಕೀಯ ವ್ಯಕ್ತಿಗೆ ಸ್ವಾಗತವಿಲ್ಲ. ಒಂದು ವೇಳೆ ಆಗಮಿಸಿದರೂ ಸಹ ವೀಕ್ಷಕನಾಗಿ ಇರಬೇಕಾಗುತ್ತದೆ. ಚುನಾವಣಾ ಜವಾಬ್ದಾರಿಯನ್ನು ಎಲ್ಲಾ ಅಧಿಕಾರಿ ವರ್ಗದವರು ನಿಷ್ಠೆಯಿಂದ ನಿರ್ವಹಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಯಾವುದೇ ಅಧಿಕಾರಿ ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಪಕ್ಷೇತರ ಅಭ್ಯರ್ಥಿ
ಪಟ್ಟಣದ ಮುಸ್ಲಿಂ ಸಮುದಾಯದ ದಾಳಿಂಬೆ ಬೆಳೆಗಾರ ಗಂದೋಡಿ ಅಬೀಬ್ ಸೇಟ್ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.
ಗುರುವಾರ ಪಟ್ಟಣದ ಸಿರಿ ಕಂಪರ್ಟ್ ರೆಸ್ಟೋರೆಂಟ್ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮುಸ್ಲಿಂ ಜನಾಂಗದವರು ಹೆಚ್ಚಿನದಾಗಿದ್ದು, ನನ್ನ ಸ್ಪರ್ಧಿಸಲು ಅವರೆಲ್ಲರ ಸಹಕಾರವಿದೆ. ನಾನಾ ಬೇರೆ ಬೇರೆ ರಾಜಕೀಯ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಟಿಕೆಟ್ ಕೇಳಿದರೂ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ನಮ್ಮ ಜನಾಂಗದವರಲ್ಲದೇ ಬೇರೆ ಬೇರೆ ಜನಾಂಗದ ಮತದಾರರು ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರೆಲ್ಲರ ಆಶೀರ್ವಾದದಿಂದ ಈ ಬಾರಿಯ ಚುನಾವಣೆಯಲ್ಲಿ ವಿಜೇತರಾದರೆ ತಾಲ್ಲೂಕಿನಲ್ಲಿ ಈಗ ಉದ್ಬವಿಸಿರುವ ಎಲ್ಲಾ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ನಿವಾರಿಸಿ ಜನಪರ ಕಾರ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಕೆ. ಕಲೀಲ್ಸಾಬ್, ಅಬ್ದಲ್ ಗನಿಸಾಬ್, ಜಿ. ನಯಾಜ್ ಅಹಮ್ಮದ್, ಇಲಾಜ್ ಅಹಮ್ಮದ್, ಮಹಬೂಬ್ ಪಾಷಾ, ನಯಾಜ್ ಅಹಮ್ಮದ್, ಮೋದಿನ್ ಖಾನ್, ಗೋಸ್ಮದೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.