ಬಳ್ಳಾರಿ: ಭಗತ್ಸಿಂಗ್ ಕಂಡಂತಹ ನೈಜ ಸ್ವಾತಂತ್ರ್ಯದ ಕನಸು ಈವರೆಗೂ ನನಸಾಗಿಲ್ಲ. ದೇಶವು ರಾಜಕೀಯವಾಗಿ ಸ್ವತಂತ್ರವಾಗಿದೆಯೇ ವಿನಾ, ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಇನ್ನೂ ಬದಲಾಗಬೇಕಿದೆ ಎಂದು ಎಐಎಂಎಸ್ಎಸ್ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಅಭಿಪ್ರಾಯಪಟ್ಟರು.
ನಗರದ ಸಿದ್ಧ ಉಡುಪು ತರಬೇತಿ ಹಾಗೂ ವಿನ್ಯಾಸ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಭಗತ್ಸಿಂಗ್ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಸಮಾನತೆ, ಲಿಂಗಭೇದ, ಮೂಡನಂಬಿಕೆ, ಜಾತಿ, ಧರ್ಮದ ಹೆಸರಿನಲ್ಲಿ ಕೋಮು ಗಲಭೆಗಳು ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಭಗತ್ಸಿಂಗ್ ಕಂಡ ಸುಂದರ ಭಾರತದ ಕನಸನ್ನು ನನಸು ಮಾಡಲು ಎಲ್ಲರೂ ಸಜ್ಜಾಗಬೇಕು ಎಂದು ಅವರು ಸಲಹೆ ನೀಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜೀ ರಹಿತ ಪಂಥದ ನಾಯಕರು ತಮಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂಬ ಬೇಡಿಕೆಯೊಂದಿಗೆ ಜನರನ್ನು ಬಲಿಷ್ಠ ಸಂಗ್ರಾಮಕ್ಕೆ ಸಜ್ಜು ಮಾಡುತ್ತಿದ್ದರು. ಬ್ರಿಟಿಷರು ದೇಶ ಬಿಟ್ಟು ತೊಲಗಿದರೆ ಸಾಲದು, ಜಾತಿ, ಧರ್ಮದ ವಿಷ ಬೀಜವನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕು, ಆರ್ಥಿಕ ಅಸಮಾನತೆ ತೊಲಗಿಸಬೇಕು, ಪ್ರತಿಯೊಬ್ಬರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ದೊರೆಯುವಂತಾಗಬೇಕು ಎಂದು ಹೋರಾಡಿದರಲ್ಲದೆ, ನೈಜ ಸ್ವಾತಂತ್ರ್ಯ ಪಡೆಯಲು ಕ್ರಾಂತಿಯ ಅವಶ್ಯಕತೆ ಇದೆ ಎಂಬುದನ್ನು ನಂಬಿದ್ದರು. ಈ ಪಂಥದ ಅಗ್ರಗಣ್ಯ ನಾಯಕರಾಗಿ ಭಗತ್ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಹೊರಹೊಮ್ಮಿದ್ದರು ಎಂದು ಅವರು ತಿಳಿಸಿದರು.
ಭಗತ್ಸಿಂಗ್ ಜ್ಞಾನಕ್ಕಾಗಿ ಹಂಬಲಿಸುತ್ತಿದ್ದರು. ಸದಾ ಅವರ ಬಳಿ ಪುಸ್ತಕಗಳನ್ನು ನೋಡಿದ್ದಾಗಿ ಸ್ನೇಹಿತರು ಹೇಳಿಕೋಳ್ಳುತ್ತಿದ್ದರು. ಭಗತ್ಸಿಂಗ್ ಕೇವಲ ಮಾಹಿತಿಗಾಗಿ ಓದದೆ, ನಿಜವಾದ ಜ್ಞಾನ ಪಡೆಯಲು ಆಳವಾಗಿ ಅಭ್ಯಸಿಸುತ್ತಿದ್ದರು ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್ ತಿಳಿಸಿದರು.