ಬೆಳಗಾವಿ: ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ನಗರದ ಜೆಎಂಎಫ್ಸಿ ಎರಡನೆಯ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಶಿವಾಜಿ ನಗರದ ಅಬ್ಬಾಸ್ಅಲಿ ಮೋಮಿನ್ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. `ನಾನು ಸೀಮೆ ಎಣ್ಣೆ ವ್ಯಾಪಾರ ಮಾಡುತ್ತೇನೆ. ಸೀಮೆಎಣ್ಣೆ ಕಳ್ಳ ಸಾಗಣೆ ಮಾಡುತ್ತಿದ್ದಿಯಾ ಎಂಬ ಆರೋಪಿಸಿ ನನಗೆ ಹಾಗೂ ನನ್ನ ಕುಟುಂಬದವರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ~ ಎಂದು ಆರೋಪಿಸಿದ ಮೋಮಿನ್, ಒಮ್ಮಿಂದೊಮ್ಮೆಲೇ ವಿಷ ಕುಡಿದಿದ್ದರಿಂದ ಸ್ವಲ್ಪಹೊತ್ತು ನ್ಯಾಯಾಲಯ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೂಡಲೇ ಮೋಮಿನ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಅವರು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ತಮ್ಮ ಸಹೋದರರಾದ ನಿಜಾಮುದ್ದೀನ್ ಅಲಿ, ನಿಯಾಜ್ ಅಲಿ ಅವರನ್ನು ಆಗಾಗ ಠಾಣೆಗೆ ಕರೆಯಿಸಿಕೊಂಡು ಡಿವೈಎಸ್ಪಿ ರವಿ ಚನ್ನಣ್ಣವರ ಕಿರುಕುಳ ನೀಡುತ್ತಿದ್ದಾರೆ. ಕುಟುಂಬದ ಇನ್ನಿತರ ಸದಸ್ಯರಿಗೂ ಹೆದರಿಸಲಾಗುತ್ತಿದೆ ಎಂದು ಮೋಮಿನ್ ಹೇಳಿದ್ದಾರೆ.
ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಮೋಮಿನ್ ವಿರುದ್ಧ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಅಗತ್ಯ ವಸ್ತುಗಳ ಕಾಯ್ದೆಯಡಿ ಇದೇ 14 ರಂದು ಮೋಮಿನ್ ಹಾಗೂ ಅವರ ಇಬ್ಬರು ನೌಕರರ ವಿರುದ್ಧ ಪ್ರಕರಣ ದಾಖಲಾಗಿಸಿಕೊಳ್ಳಲಾಗಿತ್ತು. ಮೋಮಿನ್ ನಾಪತ್ತೆಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ ಅವರು ತಿಳಿಸಿದ್ದಾರೆ.