ಹುಬ್ಬಳ್ಳಿ: ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ನಗರದ ಇಂದಿರಾಗಾಜಿನ ಮನೆಯಲ್ಲಿ ಪಂ.ಜೋಶಿ ಅವರ ಗೀತೆಗಳನ್ನು ಆಧರಿಸಿದ ನೃತ್ಯ, ಸಮೂಹ ಗಾಯನಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.
ಹಾನಗಲ್ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್, ಶಾಂತಾರಾಮ ಮ್ಯೂಸಿಕ್ ಸ್ಕೂಲ್ನ ಕಲಾವಿದರು ಸೇರಿದಂತೆ ಹಲವಾರು ಹಿರಿ-ಕಿರಿಯ ಕಲಾವಿದರು ಸಂಗೀತ, ನೃತ್ಯದ ಮೂಲಕ ಸೂಕ್ತ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅಭಿಷೇಕ ಸಂಗಮ್, ವರದಾ ಕುಲಕರ್ಣಿ ಅವರು ದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು. ನಂತರ ನೃತ್ಯ ಕಾರ್ಯಕ್ರಮದಲ್ಲಿ ಅನೂಪ್ ಕುಲಕರ್ಣಿ, ಅನನ್ಯ ದತ್ತವಾಡ ಹಾಗೂ ಶ್ರುತಿ ಮುಸಳಿ ನೃತ್ಯ ಪ್ರದರ್ಶನ ನೀಡಿದರು. ಜೋಶಿ ಅವರು ಹಾಡಿದ ಭಾಗ್ಯದ ಲಕ್ಷ್ಮೀ ಬಾರಮ್ಮ, ಮಾಧೆ ಮಾಹೇನ ಪಂಢರಿ ಎಂಬ ಗೀತೆಗಳಿಗೆ ಹೆಜ್ಜೆ ಹಾಕಿದರು.
ಲಕ್ಷ್ಮೀ ಇಟಗಿ ಎಂಬ ಪುಟ್ಟ ಪೋರಿ ಅತ್ತಿಂದಿತ್ತ ಓಡುತ್ತಾ `ನಂಬಿದೆ ನಿನ್ನ ನಾದ ದೇವತೆಯೇ...~ ಎಂಬ ಹಾಡಿಗೆ ಕುಣಿದ ನೃತ್ಯ ಪ್ರೇಕ್ಷಕರನ್ನು ಹಿಡಿದಿಟ್ಟಿತು.
ಯುವ ಸಂಗೀತ ಕಲಾವಿದರು ಶ್ರೀಕೃಷ್ಣನನ್ನು ವಾಪಸ್ ಕರೆಯುವ ಗೀತೆಯೊಂದನ್ನು ಸಮೂಹ ಗಾಯನದಲ್ಲಿ ಪ್ರಸ್ತುತಪಡಿಸಿದರು.
ನಂತರ ನಡೆದ ಚುಟುಕು ಕಾರ್ಯಕ್ರಮದಲ್ಲಿ ಗಂಗೂಬಾಯಿ ಮ್ಯೂಸಿಕ್ ಫೌಂಡೇಶನ್ನ ಸಂಗೀತ ಶಿಕ್ಷಕ ಪವನರಾವ್ ಹಳದನಕರ, ವಿಜಯ್ ಜಾಧವ, ಡಾ.ಗಂಗೂಬಾಯಿ ಅವರ ಪುತ್ರರಾದ ಬಾಬುರಾವ್, ನಾರಾಯಣರಾವ್, ಮೊಮ್ಮಗ ಹಾಗೂ ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷ ಮನೋಜ ಹಾನಗಲ್ ಹಾಗೂ ಕಲಾವಿದರು ಭೀಮಸೇನ ಜೋಶಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ನಂತರ ಅಶೋಕ ನಾಡಿಗೇರ, ಅನಿರುದ್ಧ ನೆಗಳೂರ, ರೇಖಾ ಹೆಗಡೆ, ಗಾಯತ್ರಿ ದೇಶಪಾಂಡೆ ಇತರ ಕಲಾವಿದರು ಶಾಸ್ತ್ರೀಯ ಗಾಯನ ನಡೆಸಿಕೊಟ್ಟರು.