ರಾಯಚೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನೂತನವಾಗಿ ಅಳವಡಿಸಿದ ಪಂಚತಂತ್ರ ಕಾರ್ಯವಿಧಾನ ನೂರೆಂಟು ಲೋಪದೋಷದಿಂದ ಕೂಡಿದೆ. ಕೂಡಲೇ ಇದನ್ನು ಸರಿಪಡಿಸಬೇಕು.
ಎಲ್ಲ ಪಡಿತರ ಚೀಟಿಗಳಿಗೆ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಬಿಡುಗಡೆಯಲ್ಲಿ ಆಗುವ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ವ್ಯವಸ್ಥಾಪಕರ ಒಕ್ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.
ಶುಕ್ರವಾರ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಮನವಿ ಸಲ್ಲಿಸಿದರು. ನಿಗದಿತ ಶುಲ್ಕಪಾವತಿಸಿ ದೃಢಕೃತ ಸ್ಟಿಕರ್ ಹೊಂದಿರುವ ಎಲ್ಲ ಕಾರ್ಡ್ದಾರರಿಗೆ ಸರ್ಕಾರದಿಂದ ಅಗತ್ಯ ಆಹಾರ ಧಾನ್ಯಗಳು ಬಿಡುಗಡೆಯಾಗುತ್ತಿಲ್ಲ ಎಂದು ಸಮಸ್ಯೆ ವಿವರಿಸಿದರು.
ಎಲ್ಲ ಕಾರ್ಡ್ದಾರರು ಭಾವಚಿತ್ರ ತೆಗೆಸಿಕೊಂಡದ್ದರೂ ಸರ್ಕಾರದ ಅಧಿಕೃತ ಏಜೆನ್ಸಿ ಕೋಮ್ಯಾಟ್ ಸಂಸ್ಥೆಯು ಇಲಾಖೆವಾರು ಒದಗಿಸಿರುವ ಚೆಕ್ ಲಿಸ್ಟ್ನಲ್ಲಿ ಕಾರ್ಡ್ದಾರರ ಹೆಸರಿನ ಮುಂದೆ ಭಾವಚಿತ್ರವನ್ನು ತೆಗೆಸಿಕೊಂಡಿದ್ದರೂ `ನೋ~ಎಂದು ಮುದ್ರಿತವಾಗಿರುತ್ತದೆ. ಚೆಕ್ ಲಿಸ್ಟ್ನಲ್ಲಿ ಕೆಲವು ಕಾರ್ಡ್ದಾರರ ಹೆಸರುಗಳು ಇರುವುದಿಲ್ಲ ಎಂದು ಹೇಳಿದರು.
ವಿಶೇಷ ತನಿಖಾ ತಂಡವು ನ್ಯಾಯಬೆಲೆ ಅಂಗಡಿಕಾರರ ಮೇಲೆ ಜಿಲ್ಲಾಯಾದ್ಯಂತ ದಾಳಿ ನಡೆಸಿ, ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಜೆಸ್ಕಾಂ ಇಲಾಖೆಯು ಆರ್.ಆರ್ ನಂಬರ್ ಸಂಗ್ರಹ ಮಾಡಬೇಕು, ಆಸ್ತಿ ನಂಬರ್ಗಳನ್ನು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪಡೆಯಬೇಕು ಹಾಗೂ ದೂರವಾಣಿ ಹಾಗೂ ಮೊಬೈಲ್ ನಂಬರ್ಗಳ ಸಂಗ್ರಹ ಕಾರ್ಯವನ್ನು ದೂರವಾಣಿ ಇಲಾಖೆಗೆ ವಹಿಸಲು ಆದೇಶ ನೀಡಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಶ್ರಿನಿವಾಸರೆಡ್ಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾನ್ವಿ ತಾಲ್ಲೂಕು ಅಧ್ಯಕ್ಷ ರಾಯಪ್ಪ ಮುಷ್ಟೂರು, ಲಿಂಗಸುಗೂರು ಅಧ್ಯಕ್ಷ ರಾಜೇಂದ್ರನಾಯಕ ಗುರುಗುಂಟಾ, ದೇವದುರ್ಗ ಅಧ್ಯಕ್ಷ ಕೆ.ಜಿ ಯಲ್ಲನಗೌಡ ಕೊತ್ತದೊಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.