ಸೊರಬ: ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಣೆ ಮಾಡುವ ಜತೆಗೆ ಅವುಗಳ ಮೂಲ ಉದ್ದೇಶ, ಸ್ವರೂಪಕ್ಕೆ ಕುಂದು ಬರದಂತೆ ಜಾಗ್ರತೆ ವಹಿಸುವ ಅಗತ್ಯ ಇದೆ ಎಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಕೆ.ಬಿ. ಸ್ವಾಮಿ ಹೇಳಿದರು.
ಪಟ್ಟಣದ ವಿವೇಕಾನಂದ ಶಾಲಾ ಆವರಣದಲ್ಲಿ ತ್ರೀ ಕಲರ್ಸ್ ಚಿತ್ರಕಲಾ- ಶಿಲ್ಪಕಲಾ ಟ್ರಸ್ಟ್ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಸಮಾರಂಭದ ಚಿತ್ರಕಲೆ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಈಚೆಗೆ ಮಾನತಾಡಿದರು.
ವ್ಯಂಗ್ಯ ಚಿತ್ರರಚಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಅವರು, ಕಲೆ ಮನೋವಿಕಾಸಕ್ಕೆ ಪೂರಕವಾಗಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತೆ ಇರಬೇಕು ಎಂದರು.
ಶಿಕ್ಷಣ ಸಂಯೋಜಕ ವಿ.ಬಿ. ಜಾವೂರು, ಇತಿಹಾಸ ಸಂಶೋಧಕ ಶ್ರೀಪಾದ್, ಅಣ್ಣಪ್ಪ, ಸಂಸ್ಥೆಯ ರಾಘು, ಸಂತೋಷ್, ವಿಶು ನಾವಡ, ಕಲಾವಿದ ಬಣ್ಣದ ಬಾಬು ಉಪಸ್ಥಿತರಿದ್ದರು.
ಸಂಸ್ಥೆ ಅಡಿ ಚಿತ್ರಕಲೆ ತರಬೇತಿ ಪಡೆದ ಮಕ್ಕಳು, ಕರಕುಶಲ ತರಬೇತಿ ಪಡೆದ ಯುವತಿ, ಮಹಿಳೆಯರು ತಮ್ಮ ಕಲಾಕೃತಿ ಪ್ರದರ್ಶಿಸಿದರು.
ಹತ್ತಿ ಹಾರ, ಪೇಪರ್ ಕಟಿಂಗ್, ವರ್ಣಚಿತ್ರ, ಕ್ಲೇ ಹಾಗೂ ಜಾನಪದ ಹಸೆ ಚಿತ್ತಾರ ಗಮನ ಸೆಳೆದವು.
ಕಸ್ತೂರಿ ಸಂಗಡಿಗರು ಪ್ರಾರ್ಥಿಸಿದರು. ವಿಶು ಕಾರ್ಯಕ್ರಮ ನಿರೂಪಿಸಿದರು.