ಚಿಂತಾಮಣಿ: ಆರೋಗ್ಯಕರವಾದ ಆಹಾರ ಪದ್ಧತಿ, ಸಮತೋಲನ ತೂಕ ಹಾಗೂ ದೈಹಿಕ ಕ್ರಿಯಾಶೀಲತೆಯಿಂದ ಪಾರ್ಶ್ವವಾಯು ಕಾಯಿಲೆ ತಡೆಗಟ್ಟಬಹುದು ಎಂದು ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಮುದಾಯ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಪೃಥ್ವೀಶ್ ಅಭಿಪ್ರಾಯಪಟ್ಟರು.
ನಗರದ ರಾಯಲ್ ಶಾಲೆ ಸಭಾಂಗಣದಲ್ಲಿ ಈಚೆಗೆ ಖಾಸಗಿ ಶಾಲಾ ಶಿಕ್ಷಕ ಶಿಕ್ಷಕಿಯರಿಗಾಗಿ ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಮುದಾಯ ಆಧಾರಿತ ಗ್ರಾಮೀಣ ಪಾರ್ಶ್ವವಾಯು ನೋಂದಣಿ ಸ್ಥಾಪನಾ ಪ್ರಾಯೋಗಿಕ ಯೋಜನೆ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ಶಾಲಾ ಮಕ್ಕಳ ಮೂಲಕ ಅವರ ಕುಟುಂಬಗಳಲ್ಲಿ ಪಾರ್ಶ್ವವಾಯು ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಕಾಯಿಲೆ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಪ್ರತಿಗಳನ್ನು ವಿತರಿಸುವ ಮೂಲಕ ಅರಿವು ಮಾಡಿಸಲಾಗುವುದು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಫಿರ್ದೋಸ್ ಫಾತಿಮಾ, ಶಿಕ್ಷಣ ಸಂಯೋಜಕ ಬಿ.ಜನಾರ್ದನ್ರೆಡ್ಡಿ ಮಾತನಾಡಿದರು.
ಪ್ರಾಂಶುಪಾಲರಾದ ಪ್ರೇಮಲತಾ ರಾಮಕೃಷ್ಣಾರೆಡ್ಡಿ, ಶಿಕ್ಷಣ ಸಂಯೋಜಕಿ ನಿರ್ಮಲಮ್ಮ, ಸಂಪನ್ಮೂಲ ವ್ಯಕ್ತಿ ರಮೇಶ್ ಬಾಬು, ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಸುಮನ್, ಪಾರ್ಶ್ವವಾಯು ಸಮಾಜಿಕ ಕಾರ್ಯಕರ್ತರಾದ ಬಸವರಾಜು, ರೇಣುಕಾ, ಮುನಿರಾಜು ಮತ್ತಿತರರು ಭಾಗವಹಿಸಿದ್ದರು.