`ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ದೋನಿ ಅವರ ಬ್ಯಾಟಿಂಗ್ ಅಂದ್ರೆ ತುಂಬಾ ಇಷ್ಟ. ನಾನು ಅವರಂತೆ ಆಗುತ್ತೇನೆ~ ಎಂದು ಪುಟ್ಟ ಬಾಲಕ ಆರ್ಯ ಎನ್. ಮುದ್ದು ಮುದ್ದಾಗಿ ಹೇಳುತ್ತಿದ್ದ. ಆತನ ವಯಸ್ಸು ಕೇವಲ ಐದು ವರ್ಷ...!
ಎಳೆಯ ವಯಸ್ಸು. ಸಾಧಿಸುವ ಹುಮ್ಮಸ್ಸು. ಸಾಕಷ್ಟು ಕನಸುಗಳನ್ನು ಹೊತ್ತ ಆ ಚಿಕ್ಕ ಬಾಲಕನಲ್ಲಿ ಎಲ್ಲರಿ ಗಿಂತಲೂ ಭಿನ್ನವಾದದ್ದನ್ನು ಸಾಧಿಸುವ ಛಲವಿದೆ. ಅದಕ್ಕಾಗಿ ತಕ್ಕ ಪ್ರಯತ್ನ ವಿದೆ. ಆರ್ಯ ನಿತ್ಯ ಎರಡು-ಮೂರು ಗಂಟೆ ಅಭ್ಯಾಸ ಮಾಡುವುದು. ಭಾರತ ತಂಡದ ಕ್ರಿಕೆಟಿಗರ ಹಾಗೆ ಸಮವಸ್ತ್ರ ತೊಟ್ಟು, ಹೆಲ್ಮೆಟ್, ಪ್ಯಾಡ್ ಕಟ್ಟುವು ದನ್ನು ಈತ ರೂಢಿಮಾಡಿಕೊಂಡಿ ರುವುದು ಇದಕ್ಕೆ ಸಾಕ್ಷಿ.
ಮುಂದೊಂದು ದಿನ ಭಾರತ ತಂಡವನ್ನು ಪ್ರತಿನಿಧಿಸಬೇಕು ಎನ್ನುವ ಆಸೆ ಹೊತ್ತಿರುವ ಆರ್ಯ, ತೊದಲು ನುಡಿಗಳಲ್ಲಿ ತನ್ನ ಕನಸನ್ನು `ಪ್ರಜಾವಾಣಿ~ ಎದುರು ಹಂಚಿಕೊಂಡಿದ್ದಾನೆ.
`ಮನೆಯಲ್ಲಿ ದಿನವೂ ಕ್ರಿಕೆಟ್ ನೋಡುತ್ತೇನೆ. ಸಚಿನ್ ಆಟವೆಂದರೆ ತುಂಬಾ ಇಷ್ಟ. ಆವರಂತೆಯೇ ಆಗಬೇಕು ಎನ್ನುವ ಆಸೆ. ಅದಕ್ಕೆ ನಮ್ಮ ತಂದೆ ನಾಗರಾಜ್ ಹಾಗೂ ಕೋಚ್ಗಳ ಬೆಂಬಲವಿದೆ. ಅದಕ್ಕಾಗಿ ಬೆಳಿಗ್ಗೆ 5 ಗಂಟೆಗೆ ಎದ್ದು ಕ್ರೀಡಾಂಗಣಕ್ಕೆ ಹೋಗುತ್ತೇನೆ. ಎರಡರಿಂದ ಮೂರು ಗಂಟೆ ಅಭ್ಯಾಸ ನಡೆಸುತ್ತೇನೆ. ಭವಿಷ್ಯ ದಲ್ಲಿ ಭಾರತ ತಂಡವನ್ನು ಪ್ರತಿನಿಧಿಸ ಬೇಕು~ ಎನ್ನುವ ತನ್ನ ಕನಸನ್ನು ಪುಟ್ಟ ಬಾಲಕ ಎಳೆ ಎಳೆಯಾಗಿ ಹೇಳಿದ.
`ಹತ್ತು ತಿಂಗಳ ಹಿಂದೆ ಆರಂಭವಾದ `ಸ್ಪಂಪ್ಸ್~ ಕ್ರಿಕೆಟ್ ಅಕಾಡೆಮಿಯಲ್ಲಿ ಒಂಬತ್ತು ತಿಂಗಳಿಂದ ತರಬೇತಿ ಪಡೆಯುತ್ತಿರುವ ಆರ್ಯ ಆಲ್ರೌಂಡರ್ ಆಟಗಾರ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ಕ್ಷೇತ್ರಗಳಲ್ಲೂ ಚುರುಕಾದ ಪ್ರದರ್ಶನ ನೀಡುತ್ತಾನೆ~ ಎನ್ನುತ್ತಾರೆ ಆತನ ಮೂವರು ಕೋಚ್ಗಳಲ್ಲಿ ಒಬ್ಬರಾದ ರಮೇಶ್.
`ಆರ್ಯ ಇನ್ನೂ ಚಿಕ್ಕವನು ನಿಜ. ಆದರೆ ಬುದ್ದಿ ಮಾತ್ರ ತುಂಬಾ ಚುರುಕಾಗಿದೆ. ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುತ್ತಾನೆ. ಹೊಸ ವಿಷಯಗಳನ್ನು ಬೇಗನೇ ಅರಿತುಕೊಳ್ಳುತ್ತಾನೆ~ ಎಂದು ರಮೇಶ್ ವಿವರಿಸಿದರು.
ಇತ್ತೀಚಿಗೆ ನಡೆದ ಕ್ರಿಕೆಟ್ ಟೂರ್ನಿಯೊಂದರಲ್ಲಿ 13 ವರ್ಷದೊಳಗಿನವರ ವಿಭಾಗದಲ್ಲಿ ಆರ್ಯ ಮೊದಲ ಪಂದ್ಯ ಆಡಿದ್ದಾನೆ. ವಿಶೇಷವೆಂದರೆ, ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾನೆ. ಅಷ್ಟೇ ಅಲ್ಲ ನೋಡುಗರ ಪಾಲಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾನೆ.
`ಆರು ವರ್ಷದ ಮುಶೀರ್ ಖಾನ್ ಕಳೆದ ತಿಂಗಳು ಮುಂಬೈಯಲ್ಲಿ ಪ್ರಥಮ ಪಂದ್ಯವನ್ನಾಡುವ ಮೂಲಕ ದಾಖಲೆ ಮಾಡಿದ್ದ. ಈಗ ಆ ಬಾಲಕನಿಗಿಂತಲೂ ಕಡಿಮೆ ವಯಸ್ಸಿನ ಆರ್ಯ ದಾಖಲೆ ಮಾಡಿದ್ದಾನೆ~ ಎನ್ನುವುದು ಕೋಚ್ ವಿಶ್ಲೇಷಣೆ.
ಪ್ಯಾಡ್ ಕಟ್ಟಿ ಕ್ರೀಡಾಂಗಣಕ್ಕಿಳಿ ಯುವ ಆರ್ಯ, ಲೆದರ್ ಬೌಲ್ನಲ್ಲಿಯೇ ನಿತ್ಯದ ಅಭ್ಯಾಸ ನಡೆಸುತ್ತಾನೆ. ಬೆಂಗಳೂರಿನ ಎಂಬೆಸಿ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಓದುತ್ತಿರುವ ಈ ಪುಟ್ಟ ಬಾಲಕನ ಪ್ರತಿಭೆಗೆ ತಂದೆ ನಾಗರಾಜ್ ಬೆಂಬಲ ನೀಡುತ್ತಿದ್ದಾರೆ. ಬರಿಗಾಲಿನಿಂದಲೇ ಓಡುವುದು ಕಷ್ಟವಾಗಿರುವಾಗ ಪ್ಯಾಡ್ ಕಟ್ಟಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಓಡುವುದು ಸವಾಲಿನ ಕೆಲಸವೇ ಸರಿ.
`ಎರಡು ವರ್ಷದ ಮಗುವಾಗಿದ್ದಾಗ ಪ್ಲಾಸ್ಟಿಕ್ ಬ್ಯಾಟಿನಿಂದ ಆಡುತ್ತಿದ್ದ. ಮಕ್ಕಳು ದೈಹಿಕವಾಗಿ ಬಲಿಷ್ಠರಾಗಿರಲು, ಕ್ರೀಡೆ ಅಗತ್ಯ ಎನ್ನುವ ಕಾರಣಕ್ಕೆ ಕ್ರಿಕೆಟ್ ಆಡಲು ರೂಢಿ ಮಾಡಿಸಿದೆ. ಇಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾನೆ~ ಎಂದು ನಾಗರಾಜ್ ಸಂತಸ ವ್ಯಕ್ತಪಡಿಸಿದರು.
ಕೇವಲ ಶಾಲೆ, ಓದು, ಮನರಂಜನೆ ಅಬ್ಬರದಲ್ಲಿ ತಬ್ಬಿಬ್ಬುಗೊಳ್ಳುವುದರಲ್ಲಿ ಬಾಲ್ಯ ಕಳೆದು ಹೋಗುವ ಬದಲು, ಹೀಗೆ ಸಾಧನೆಯ ಹಾದಿಯಲ್ಲಿ ಸಾಗುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಗೆಲುವಿನಡೆಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಿರುವ ಆರ್ಯನ ಹೆಜ್ಜೆಗಳು ಮುಂದಿನ ದಿನಗಳಲ್ಲಿ ದೊಡ್ಡವಾಗಲಿ...!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.