ಬ್ರಾಹ್ಮಣರ ಹುಡುಗ- ಒಕ್ಕಲಿಗರ ಹುಡುಗಿಯ ನಡುವೆ ಪ್ರೇಮದ ಚಿಗುರು. ಈ ಪ್ರೇಮ ವಿವಾಹದಲ್ಲಿ ಕೊನೆಗೊಳ್ಳುವ ಕಥೆ ಹೊಂದಿರುವ ಚಿತ್ರ `ಗವಿಪುರ~. ಜಾತ್ಯತೀತ ನಿಲುವನ್ನು ಸಿನಿಮಾ ಪ್ರತಿಪಾದಿಸಲಿದೆ ಎನ್ನುವುದು ಚಿತ್ರತಂಡದ ವಿವರಣೆ.
ನಾಯಕ ಸೂರಜ್ ಸಾಸನೂರು ಮತ್ತು ನಾಯಕಿ ಸೌಜನ್ಯ ಹೊಸಬರಾದ ಕಾರಣ ಅವರನ್ನು ಪರಿಚಯಿಸುವ ಸಲುವಾಗಿ ಚಿತ್ರದ ಸೀಡಿ ಬಿಡಗಡೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಚಿತ್ರದ ಕೆಲವು ಹಾಡುಗಳನ್ನು ತೋರಿಸಲಾಯಿತು. ಮತ್ತೆ ಕೆಲವು ಹಾಡುಗಳನ್ನು ನಾಯಕ-ನಾಯಕಿ ನೃತ್ಯದ ಮೂಲಕ ಪ್ರದರ್ಶಿಸಿದರು.
ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಒಂದಾದ ಗವಿಪುರದಲ್ಲಿಯೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕ ಕುಮಾರ್ ತಿಳಿಸಿದರು. ಅವರು ಈ ಮೊದಲು `ಮಾರಿಕಣ್ಣುಹೋರಿ ಮ್ಯಾಗೆ~, `ಸುಲ್ತಾನ~, `ಲವಲವಿಕೆ~ ಚಿತ್ರಗಳನ್ನು ನಿರ್ದೇಶಿಸ್ದ್ದಿದವರು.
ಸಮಾರಂಭದಲ್ಲಿ ಹಾಜರಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್, ತಾವು 27 ವರ್ಷ ಗವಿಪುರದಲ್ಲಿ ನೆಲೆಸಿದ್ದ ಕಾರಣ ಈ ಬಡಾವಣೆ ತಮ್ಮ ಜೀವನಕ್ಕೆ ಹತ್ತಿರವಾಗಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ನಿರ್ಮಾಪಕ ಮದನ್ ಪಟೇಲ್, ಹಿರಿಯ ನಟ ಶಿವರಾಂ, ಚಿತ್ರದ ನಿರ್ಮಾಪಕ ಜಗನ್ನಾಥ ಹೆಗಡೆ, ಚಿತ್ರದ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಹಾಜರಿದ್ದರು.