ನವದೆಹಲಿ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಪೆಟ್ರೋಲ್ ಏರಿಕೆ ಹಿಂಪಡೆಯುವುದನ್ನು ತಳ್ಳಿಹಾಕಿದ್ದಷ್ಟೇ ಅಲ್ಲ ಭವಿಷ್ಯದಲ್ಲಿ ಬೆಲೆ ಏರಿಸಲಾಗುವುದಿಲ್ಲ ಎಂಬ ಖಾತರಿ ನೀಡಲೂ ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ಸುದ್ದಿ ಮೂಲಗಳು ಬುಧವಾರ ಬಹಿರಂಗ ಪಡಿಸಿವೆ.
ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ್ದ ತೃಣಮೂಲ ಕಾಂಗ್ರೆಸ್ ಸಂಸದರು, ಸಚಿವರ ನಿಯೋಗಕ್ಕೆ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಹಾಲಿ ಬೆಲೆ ಏರಿಕೆಯನ್ನು ಹಿಂಪಡೆಯುವುದು ಬಿಡಿ, ಭವಿಷ್ಯದಲ್ಲಿ ಬೆಲೆ ಏರಿಸಲಾಗದೆಂಬ ಯಾವುದೇ ಖಾತರಿ ನೀಡಲೂ ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ನಿಯೋಗಕ್ಕೆ ಸ್ಪಷ್ಟ ಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತದ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸಮಸ್ಯೆ ಹಾಗೂ ಸರ್ಕಾರಿ ಹಣಕಾಸು ಸಮಸ್ಯೆಗಳ ಬಗ್ಗೆ ಸಂಸದತಿಗೆ ವಿವರಿಸಲಾಗಿತ್ತು ಎಂದೂ ಮೂಲಗಳು ಹೇಳಿವೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರೂ ಒಂದು ರಾಜ್ಯ ಸರ್ಕಾರವನ್ನು ನಡೆಸುತ್ತಿದ್ದಾರೆ, ಇಂತಹ ಕ್ರಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು ವ್ಯವಸ್ಥೆಗಳಿಗೂ ಧಕ್ಕೆ ಉಂಟು ಮಾಡಬಹುದು ಎಂದೂ ಸಂಸದರ ನಿಯೋಗಕ್ಕೆ ತಿಳಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಭವಿಷ್ಯದಲ್ಲಿ ತೈಲ ಬೆಲೆ ಏರಿಕೆ ಮಾಡುವ ಮುನ್ನ ಅಂಗ ಪಕ್ಷಗಳ ಮುಖ್ಯಮಂತ್ರಿಗಳನ್ನು ಸಮಾಲೋಚಿಸುವ ಬಗೆಗೂ ಯಾವುದೇ ಖಾತರಿ ನೀಡಲಾಗದು ಎಂದೂ ತೃಣಮೂಲ ಸಂಸದರ ನಿಯೋಗಕ್ಕೆ ತಿಳಿಸಲಾಗಿತ್ತು ಎಂದೂ ಮೂಲಗಳು ಹೇಳಿವೆ.