ಪೆರಿಯಾರ್ ರಾಮಸ್ವಾಮಿ ನಾಯಕರ್ ಅವರ ಜಯಂತಿ ಈ ತಿಂಗಳ 17ರಂದು ಇತ್ತು. ಪೆರಿಯಾರರು ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಮೂಲದ ವಾಲ್ಮೀಕಿ (ನಾಯಕ) ಸಮುದಾಯದವರು. ಇವರ ವಂಶಸ್ಥರ ಮೂಲ ಕರ್ನಾಟಕವಾದರೂ ಪೆರಿಯಾರರು ಹುಟ್ಟಿದ್ದು ತಮಿಳುನಾಡಿನ ಈರೋಡಿನಲ್ಲಿ.
ಸ್ವಾಭಿಮಾನಿ ಚಳವಳಿ ಕಟ್ಟಿದ ಈ ‘ನಾಯಕ ಸರದಾರ’ ತಮಿಳುನಾಡಿನಲ್ಲಿ ವೈಚಾರಿಕತೆಯ ಬೀಜ ಬಿತ್ತಿದವರು. ಅಲ್ಲಿನ ರಾಜಕೀಯದಲ್ಲಿ ದ್ರಾವಿಡ ರಾಜಕೀಯದ ಹೊಸ ಶಕೆ ಆರಂಭವಾಗಲು ಕಾರಣರಾದವರು. ಅದರ ಫಲವಾಗಿಯೇ ತಮಿಳುನಾಡಿನಲ್ಲಿ ಇಂದು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸರದಿ ಮೇಲೆ ಅಧಿಕಾರ ಅನುಭವಿಸುತ್ತಿವೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಇತ್ಯಾದಿ ‘ಆರ್ಯ’ರ ಪಕ್ಷಗಳಿಗೆ ಕಿಮ್ಮತ್ತಿಲ್ಲ. ಅಂಬೇಡ್ಕರರಿಗೆ ಸರಿಸಮನಾದ ಇಂತಹ ಮಹಾನ್ ನಾಯಕನನ್ನು ಅವರ ಕರ್ನಾಟಕದ ನಾಯಕ ಬಂಧುಗಳೇ ಮರೆತಿರುವುದು ವಿಷಾದನೀಯ.
ರಾಜ್ಯದ ನಾಯಕ ಸಮುದಾಯದವರಿಗೆ ಈಚಿನ ಬಿ. ಶ್ರೀರಾಮುಲು ಅಥವಾ ಪುರಾಣದ ವಾಲ್ಮೀಕಿ ಮಹರ್ಷಿ ‘ನಾಯಕ’ರಾಗುತ್ತಾರೆ. ವೈಚಾರಿಕ ನೆಲೆಯಲ್ಲಿ ಒಂದು ರಾಜ್ಯದ ಆಲೋಚನೆಯ ದಿಕ್ಕನ್ನೇ ಬದಲಿಸಿದ ನೇತಾರ ನೆನಪಿಗೆ ಬರುವುದಿಲ್ಲ. ಇದು ದುರಂತವೋ ಅಥವಾ ಅನಕ್ಷರತೆಯ ಫಲವೋ, ಒಟ್ಟಾರೆ ಕರ್ನಾಟಕದ ನಾಯಕ ಸಮುದಾಯ ತನ್ನದೇ ಸಮುದಾಯದ ಮಹಾನ್ ನಾಯಕನನ್ನು ಮರೆತಿರುವುದಂತೂ ಸುಳ್ಳಲ್ಲ.