ಬೀದರ್: ‘ಬೀದರ್ ಉತ್ಸವ’ದ ಎರಡನೇ ದಿನವಾದ ಶನಿವಾರ ನಗರದ ಕೋಟೆಯಲ್ಲಿ ನಡೆದ ಪತಂಗ ಉತ್ಸವದ ಪೇಂಚ್ ಸ್ಪರ್ಧೆಯಲ್ಲಿ ಶಾಸಕ ರಹೀಮ್ಖಾನ್ ಹಾಗೂ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ನಡುವೆ ಜುಗಲ್ಬಂದಿ ನಡೆಯಿತು.
ಶಾಸಕ ಹಾಗೂ ಜಿಲ್ಲಾಧಿಕಾರಿ ಪರಸ್ಪರ ಪತಂಗಳಿಗೆ ಪೇಂಚ್ ಹಾಕಿ ವಿಜಯ ಪತಾಕೆ ಹಾರಿಸಲು ಸಾಕಷ್ಟು ಕಸರತ್ತು ನಡೆಸಿದರು.ವಿವಿಧ ಪಟ್ಟುಗಳನ್ನು ಬಳಸಿ ಪರಸ್ಪರರು ಪತಂಗಗಳನ್ನು ಕಟ್ ಮಾಡಲು ಪ್ರಯತ್ನಿಸಿದರು. ಸಂಕಟದಲ್ಲಿದ್ದ ತಮ್ಮ ಪತಂಗವನ್ನು ಕೆಲವೊಮ್ಮೆ ಬಚಾವ್ ಮಾಡಿಕೊಂಡು ಜಾಣ್ಮೆ ಮೆರೆದರು.
ಸುಮಾರು ಅರ್ಧ ಗಂಟೆಗಳ ಕಾಲ ಶಾಸಕ ಹಾಗೂ ಜಿಲ್ಲಾಧಿಕಾರಿ ನಡುವೆ ಪೈಪೋಟಿ ನಡೆಯಿತು.ಆದರೆ, ಯಾರೂ ಸೋಲಲಿಲ್ಲ. ಗೆಲ್ಲಲೂ ಇಲ್ಲ.ಇದಕ್ಕೂ ಮುನ್ನ ಮಹಿಳಾ ಪತಂಗ ಉತ್ಸವ ಕೂಡ ನಡೆಯಿತು.ಅನೇಕ ಮಹಿಳೆಯರು ಪಟ ಹಾರಿಸಿ ಸಂಭ್ರಮಿಸಿದರು. ಎಎಫ್ಡಬ್ಲ್ಯೂಎ ಅಧ್ಯಕ್ಷೆ ಸುಮಿತ್ರಾ ಉದ್ಘಾಟಿಸಿದರು.ಮಂಗಲಾ ಭಾಗವತ್ ನಿರೂಪಿಸಿದರು.
ಆಕರ್ಷಕ ಪತಂಗಗಳ ಸ್ಪರ್ಧೆಯಲ್ಲಿ ಮೀನಿನ ಆಕೃತಿ ಸೇರಿದಂತೆ ವಿವಿಧ ಮಾದರಿ ಪತಂಗಗಳು ಕಂಡವು.ಉತ್ಸವದ ಅಂಗವಾಗಿ ಶತಮಾನದಷ್ಟು ಹಳೆಯ ಪತಂಗಗಳ ಪ್ರದರ್ಶನ ಏರ್ಪಡಿಸಲಾಗಿದೆ. ‘ಸೈಮನ್ ಗೋಬ್ಯಾಕ್’ ಎಂದು ಬರೆದಿದ್ದ ಗಾಳಿಪಟ ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾನಂಗಣದಲ್ಲಿ ಆಡಿದ್ದ ಪಟಗಳ ಪ್ರದರ್ಶನ ಮುದ ನೀಡಿತು. ಪತಂಗ ಉತ್ಸವ ಸಮಿತಿಯ ಅಧ್ಯಕ್ಷ ಡಾ.ರಾಜಶೇಖರ ಕೌಜಲಗಿ, ಪ್ರಮುಖರಾದ ಡಾ. ಮಕ್ಸೂದ್ ಚಂದಾ, ರವಿ ಮೂಲಗೆ, ರಮೇಶ ಪಾಟೀಲ್ ಸೋಲಪುರ,ಅನೀಲಕುಮಾರ ಬೆಲ್ದಾರ, ನಬಿ ಖುರೈಶಿ ಮತ್ತಿತರರು ಇದ್ದರು.