ಕಮಲನಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಜಿಲ್ಲಾ ಪಂಚಾಯಿತಿ ಸದಸ್ಯೆ ನೀಲಮ್ಮ ಶಿವಾನಂದ ವಡ್ಡೆ ಅವರು ಮಗುವೊಂದಕ್ಕೆ ಪಲ್ಸ್ ಪೋಲಿಯೊ ಹನಿ ಹಾಕುವುದರ ಮೂಲಕ ಪ್ರಥಮ ಹಂತದ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೋಲಿಯೊ ಲಸಿಕೆ ಹಾಕುವ ಮೂಲಕ ರೋಗ ಬರದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳಿಗೆ ಪೋಲಿಯೊ ರೋಗ ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದರು. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ಒಟ್ಟು 2870 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ.
ಈ ನಿಟ್ಟಿನಲ್ಲಿ ಕಮಲನಗರದಲ್ಲಿ 7, ಮದನೂರ್, ಹಕ್ಯಾಳ, ಬಾಲೂರ್, ಮುರ್ಗ್ (ಕೆ), ಹೊರಂಡಿ, ಸೋನಾಳ ಹಾಗೂ ಚಂದನವಾಡಿ ಗ್ರಾಮಗಳಲ್ಲಿ ತಲಾ ಒಂದೊಂದು ಪೋಲಿಯೊ ಲಸಿಕೆ ಕೇಂದ್ರಗಳನ್ನು ನಿಯೋಜಿಸಲಾಗಿದೆ. ಹೀಗೆ ಒಟ್ಟು 12 ಬೂತ್ಗಳು ಹಾಗೂ 2 ಸಂಚಾರಿ ಬೂತ್ಗಳನ್ನು ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ.
ಕೇಂದ್ರದ ವ್ಯಾಪ್ತಿಯಲ್ಲಿ 23,923 ಜನಸಂಖ್ಯೆಯಿದ್ದು, ಪ್ರಥಮ ದಿನವಾದ ಭಾನುವಾರದಂದು ಬೂತ್ ಮಟ್ಟದಲ್ಲಿ ಮತ್ತು ದಿ. 20, 21 ಹಾಗೂ 22 ರಂದು ವ್ಯಾಪ್ತಿಯ ಒಟ್ಟು 3725 ಮನೆಗಳಿಗೆ ತೆರಳಿ ಅಗತ್ಯ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ.