ಮಂಡ್ಯ: ಬಿಜೆಪಿ ಸೇರಿದಂತೆ ಯಾವುದೇ ಪಕ್ಷಕ್ಕೆ ಹೆದರುವುದಿಲ್ಲ. ಟೀಕೆಗಳಿಗೆ ಬಗ್ಗುವುದಿಲ್ಲ. ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ. ಜನಪರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾಗಾಂಧಿ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ವಿಧಾನಸಭೆ, ಲೋಕಸಭೆ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.
ಯುಪಿಎ ಸರ್ಕಾರು ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಉದ್ಯೋಗ ಖಾತ್ರಿ, ಮಹಿಳಾ ರಕ್ಷಣೆ ಸೇರಿದಂತೆ ಹಲವು ಜನಪರ ಕಾನೂನುಗಳನ್ನು ಜಾರಿಗೊಳಿಸಿದೆ. ಕೇಂದ್ರದಲ್ಲಿ ಆರು ವರ್ಷ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಅವರಿಗೆ ಜನಪರ ಕಾಳಜಿ ಇಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಪ್ರಧಾನಮಂತ್ರಿಗಳ ಬಗೆಗೆ ಪ್ರತಿಕ್ಷಗಳು ನಿತ್ಯ ಗೇಲಿ ಮಾಡುತ್ತವೆ. ಆದರೆ, ಕಾಂಗ್ರೆಸ್್ ಪಕ್ಷವು ಸಂಪೂರ್ಣವಾಗಿ ಪ್ರಧಾನಿಯವರ ಜೊತೆಗೆ ಇದೆ. ತತ್ವ, ಸಿದ್ಧಾಂತಗಳ ತಳಹದಿಯ ಮೇಲೆ ಪಕ್ಷ ಕಟ್ಟಲಾಗಿದೆ. ಮಹಾತ್ಮಾಗಾಂಧಿ, ಜವಹಾರಲಾಲ ನೆಹರು, ಇಂದಿರಾಗಾಂಧಿಯಂತವರು ಮುನ್ನಡೆಸಿದ್ದಾರೆ. ಸಾಮಾಜಿಕ ನ್ಯಾಯ ಕಾಪಾಡಲು ಬದ್ಧವಿದೆ. ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಲಿದೆ ಎಂದು ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ನೀಡಿದರು.
ಆಹಾರ ಭದ್ರತೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಪ್ರತಿಪಕ್ಷ ಬಿಜೆಪಿಯು ರೈತರಿಗೆ ಲಾಭವಾಗುವುದಿಲ್ಲ ಎಂದು ಟೀಕಿಸಿತು. ಈ ಕಾಯ್ದೆಯಿಂದ ರಾಜ್ಯ ಸೇರಿದಂತೆ ದೇಶಕ್ಕೆ ದೊಡ್ಡ ಲಾಭವಾಗಲಿದೆ. ರೈತರು ಯುಪಿಎ ಸರ್ಕಾರದ ನೀತಿಗಳ ಕೇಂದ್ರ ಬಿಂದುವಾಗಿರಲಿದ್ದಾರೆ ಎಂದು ಹೇಳಿದರು.