ಬೆಳಗಾವಿ: ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ರಾಜ್ಯದ ಎಲ್ಲ ಸಂಸದರು ಮತ್ತು ಶಾಸಕರು ಪ್ರಧಾನಿಯನ್ನು ಭೇಟಿ ಮಾಡಿ ಒತ್ತಡ ಹೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ಮಾಡಿದರು.
`ಈ ಬಗ್ಗೆ ಸ್ಪೀಕರ್ ಕೆ.ಜಿ.ಬೋಪಯ್ಯ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾನೂನು ಸಚಿವ ಎಸ್.ಸುರೇಶಕುಮಾರ್ ಅವರಿಗೆ ಸಲಹೆ ಮಾಡಿದ್ದೇನೆ. ಎರಡು ದಿನಗಳ ಮಟ್ಟಿಗೆ ಸದನ ಮುಂದೂಡಿ, ಎಲ್ಲ ಶಾಸಕರ ಜತೆ ದೆಹಲಿಗೆ ಹೋಗಬೇಕು. ಪ್ರಧಾನಿಯನ್ನು ಭೇಟಿ ಮಾಡಿ ವಸ್ತುಸ್ಥಿತಿಯ ಬಗ್ಗೆ ಮನವರಿಕೆ ಮಾಡಬೇಕು ಎಂದು ವಿವರಿಸಿದ್ದೇನೆ' ಎಂದು ಹೇಳಿದರು.
ಈ ವಿಷಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಒಂದಾಗಿ ಹೋರಾಟ ನಡೆಸಬೇಕು. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನೀರು ಬಿಡುವುದು ಅನಿವಾರ್ಯ. ಆದರೆ, ತಕ್ಷಣಕ್ಕೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ, ರಾಜ್ಯದ ಪರಿಸ್ಥಿತಿಯನ್ನೂ ವಿವರಿಸಬೇಕು ಎಂದೂ ಅವರು ವಿವರಿಸಿದರು.