ಮೈಸೂರು: ತಮಿಳುನಾಡಿನ ಎಸ್. ಪ್ರಸನ್ನ ಇಲ್ಲಿ ನಡೆಯುತ್ತಿರುವ 3ನೇ ಎಂಡಿಸಿಎ ಅಖಿಲ ಭಾರತ ಫಿಡೆ ರೇಟಿಂಗ್ ಮುಕ್ತ ಚೆಸ್ ಟೂರ್ನಿಯ ಏಳು ಸುತ್ತುಗಳಲ್ಲಿ ಸತತ ಗೆಲುವು ಸಾಧಿಸಿದ್ದಾರೆ.
ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯು ಎಂಜಿನಿಯರ್ಸ್ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಗುರುವಾರ ನಡೆದ ಟೂರ್ನಿಯ ಏಳನೇ ಸುತ್ತಿನಲ್ಲಿ ಎಸ್. ಪ್ರಸನ್ನ (ಶ್ರೇಯಾಂಕ: 2128) ತಮ್ಮ ರಾಜ್ಯದವರೇ ಆದ ಫಿಡೆ ಮಾಸ್ಟರ್ ಶ್ರೀಜಾ ಶೇಷಾದ್ರಿ (ಶ್ರೇ: 1971) ವಿರುದ್ಧ ಜಯ ಗಳಿಸಿದರು. ಬುಧವಾರ ರಾತ್ರಿ ಮುಕ್ತಾಯವಾದ ಆರನೇ ಸುತ್ತಿನಲ್ಲಿ ಪ್ರಸನ್ನ ಅವರು ಕರ್ನಾಟಕದ ಗವಿಸಿದ್ಧಯ್ಯ ಅವರಿಗೆ ಸೋಲಿನ ರುಚಿ ತೋರಿಸಿದ್ದರು.
ಶ್ರೀಜಾ ಶೇಷಾದ್ರಿ ಯವರು ಕರ್ನಾಟಕದ ಆದಿತ್ಯ ಚಕ್ರವರ್ತಿ ಅವರನ್ನು ಪರಾಭವಗೊಳಿಸಿದ್ದರು.
ಏಳನೇ ಸುತ್ತಿನಲ್ಲಿ ಕೇರಳದ ಕೆ. ಅಲೆಕ್ಸ್ ಥಾಮಸ್ ಅವರನ್ನು ಸೋಲಿಸಿದ ತಮಿಳುನಾಡಿನ ಎಸ್. ಗಣೇಶಬಾಬು ಅವರು ಆರೂವರೆ ಪಾಯಿಂಟ್ಸ್ನಿಂದ ಎರಡನೇ ಸ್ಥಾನದಲ್ಲಿದ್ದಾರೆ.
ಕಿಶನ್ ಗಂಗೋಳ್ಳಿ ಮುನ್ನಡೆ: ಕರ್ನಾಟಕದ ಕಿಶನ್ ಗಂಗೊಳ್ಳಿ ಏಳು ಸುತ್ತುಗಳಲ್ಲಿ ಒಟ್ಟು ಆರು ಪಾಯಿಂಟ್ ಗಳಿಸಿದ್ದಾರೆ. ಏಳನೇ ಸುತ್ತಿನಲ್ಲಿ ಅವರು ಮೈಸೂರಿನ ಎಚ್.ಎ. ಅಮೋಘ ವಿರುದ್ಧ ಗೆದ್ದರು. ರಾಜ್ಯದ ಇನ್ನೊಬ್ಬ ಆಟಗಾರ ನವೀನ್ ಎಸ್. ಹೆಗಡೆ ಶರಣ್ ರಾವ್ ಅವರನ್ನು ಸೋಲಿಸಿ 6 ಪಾಯಿಂಟ್ಗಳನ್ನು ತಮ್ಮ ಜೇಬಿಗಳಿಸಿದ್ದಾರೆ.
ಏಳನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಕರ್ನಾಟಕದ ಎ. ಆಗಸ್ಟಿನ್ ಎಂ. ಕುನಾಲ್ ಎದುರು; ರಾಮಚಂದ್ರ ಭಟ್ ತಮಿಳುನಾಡಿನ ಸೈಯ್ಯದ್ ಅನ್ವರ್ ಶಾಜುಲಿ ಎದುರು; ಗವಿಸಿದ್ಧಯ್ಯ ಎನ್. ಕೃಷ್ಣ ಕಾರ್ತಿಕ್ ಎದುರು; ಅಕ್ಷಯ್ ವಿ. ಹಲಗಣ್ಣ ಎಸ್ಎಸ್ಸಿಬಿಯ ಕೆ. ಶ್ರೀಕಾಂತ್ ಎದುರು ಸೋಲನುಭವಿಸಿದರು.
ಆದಿತ್ಯ ಚಕ್ರವತಿ ಮತ್ತು ಕೇರಳದ ಓ.ಟಿ. ಅನಿಲಕುಮಾರ್; ಕೆ.ಎಸ್. ರಘುನಂದನ್ ಮತ್ತು ತಮಿಳುನಾಡಿನ ಎಸ್. ಜಯಕುಮಾರ್; ಕರ್ನಾಟಕದ ಅಕ್ಷಯ್ ಭಾರದ್ವಾಜ್ ಮತ್ತು ಸಂತೋಷ್ ಕಶ್ಯಪ್ ನಡುವಿನ ಪಂದ್ಯಗಳು ಸಮವಾದವು.