ನವದೆಹಲಿ (ಪಿಟಿಐ): ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಸಹಾಯಕ ಆಡಳಿತಾಧಿಕಾರಿ ಹುದ್ದೆಯ ನೇಮಕಾತಿಗೆ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಬಯಲಾಗಿದ್ದು, ಈ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆಯನ್ನು ತಲಾ ರೂ 5 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದ ಪವನ್ ಕುಮಾರ್ (33) ಆರೋಪಿಯಾಗಿದ್ದು, ಈತನಿಂದ ಪ್ರಶ್ನೆಪತ್ರಿಕೆಗಳನ್ನು ಖರೀದಿಸಿದ ಆಪಾದನೆ ಮೇಲೆ ನಾಲ್ವರು ಅಭ್ಯರ್ಥಿಗಳನ್ನು ಪರೀಕ್ಷೆ ತೆಗೆದುಕೊಳ್ಳದಂತೆ ಅನರ್ಹಗೊಳಿಸಲಾಗಿದೆ.
ದೆಹಲಿ ಅಪರಾಧ ವಿಭಾಗದ ಪೊಲೀಸರಿಗೆ ಭಾನುವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆಯಬೇಕಿದ್ದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಶನಿವಾರ ಸಂಜೆ ದೊರಕ್ಕಿದ್ದವು. ಹಾಗಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ‘ನಮಗೆ ದೊರಕಿದ ಪ್ರಶ್ನೆಪತ್ರಿಕೆಗಳ ಪತ್ರಿಯು ಮೂಲ ಪ್ರಶ್ನೆಪತ್ರಿಕೆಯ ಯಥಾವತ್ ರೂಪದಾಗಿದ್ದೆ. ಇದನ್ನು ದೆಹಲಿಯ ಎರಡು ಮತ್ತು ಚಂಡೀಗಡದ ಒಂದು ಪರೀಕ್ಷಾ ಕೇಂದ್ರದಲ್ಲಿ ಮೂಲದೊಂದಿಗೆ ಹೊಲಿಕೆ ಮಾಡಿ ಖಾತರಿ ಮಾಡಿಕೊಳ್ಳಲಾಗಿದೆ’ ಎಂದು ಎಂದು ಪೊಲೀಸ್ (ಅಪರಾಧ ವಿಭಾಗ) ಉಪ ಆಯುಕ್ತ ಅಶೋಕ್ ಚಂದ್ ಅವರು ಹೇಳಿದ್ದಾರೆ.
‘ಬಂಧಿತನಾಗಿರುವ ಆರೋಪಿ ಪವನ್ ಕುಮಾರ್ ಪ್ರಶ್ನೆಪತ್ರಿಕೆ ಬಯಲು ಮಾಡುವ ದಂಧೆಯ ಪ್ರಮುಖ ಆರೋಪಿಯಾಗಿದ್ದು, ಈತ ದೆಹಲಿ ವಿಶ್ವವಿದ್ಯಾಲಯದಿಂದ ಭೂಗೋಳ ವಿಷಯದಲ್ಲಿ ಪದವೀಧರ. ನಾಗರಿಕ ಸೇವಾ ಪರೀಕ್ಷೆಯನ್ನು ಬರೆದಿದ್ದನಾದರೂ ತೇರ್ಗಡೆಯಾಗಿರಲಿಲ್ಲ. 2005ರಿಂದ ಇವನು ಇಂತಹ ದಂಧೆಯಲ್ಲಿ ತೊಡಗಿದ್ದು, ಈ ಹಿಂದೆ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಯಲುಗೊಳಿಸಿದ ಆಪಾದನೆ ಮೇಲೆ ಬಂಧಿತನಾಗಿದ್ದ. ಪವನ್ಗೆ ಈ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲು ನೀಡಿದ ಈ ದಂಧೆಯ ಮುಖ್ಯ ವ್ಯಕ್ತಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದರು.
‘ಪವನ್ನಿಂದ ಪ್ರಶ್ನೆಪತ್ರಿಕೆಗಳನ್ನು ಖರೀದಿಸಿದ ಪರೀಕ್ಷಾರ್ಥಿಗಳನ್ನು ಇಂದ್ರಜಿತ್, ರಾಹುಲ್ ಕುಮಾರ್, ಪ್ರವೀಣ್ ಮತ್ತು ಧರ್ಮವೀರ್ ಎಂದು ಗುರುತಿಸಲಾಗಿದೆ. ಸೂಚನೆ: ಎಲ್ಐಸಿಯಿಂದ ಈ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಗುತ್ತಿಗೆ ಪಡೆದಿರುವ ಇಡಿಸಿಐಎಲ್ ವ್ಯವಸ್ಥಾಪಕ ನಿರ್ದೇಶಕಿ ಅಂಜು ಬ್ಯಾನರ್ಜಿ ಈ ಪ್ರಕರಣವನ್ನು ದುರದೃಷ್ಟಕರ ಎಂದಿದ್ದು, ಭಾನುವಾರ ಪರೀಕ್ಷೆಗಳು ಮುಗಿದ ನಂತರ ಎಲ್ಲಾ ಪರೀಕ್ಷಾ ಕೇಂದ್ರಗಳಿಂದ ಉತ್ತರ ಪತ್ರಿಕೆಗಳನ್ನು ವಶಪಡಿಸಿಕೊಳ್ಳುವಂತೆ ಇಡಿಸಿಐಎಲ್ನ ಜಾಗೃತ ದಳಕ್ಕೆ ಸೂಚಿಸಿದ್ದಾರೆ.‘ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ದೇಶದಾದ್ಯಂತ 160 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, 1.65 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿದ್ದಾರೆ. ದೆಹಲಿಯಲ್ಲಿ 16 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯುತ್ತಿತ್ತು’ ಎಂದು ಅವರು ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.