ಚನ್ನರಾಯಪಟ್ಟಣ: ‘ಜೈನ ಧರ್ಮಿಯರು ವಾಣಿಜ್ಯ ಕ್ಷೇತ್ರದಲ್ಲಿ ಉತ್ತಮ ಮಟ್ಟದಲ್ಲಿದ್ದಾರೆ. ತಾವು ಗಳಿಸಿದ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಮತ್ತು ಬಡವರ ಸೇವೆ ಮಾಡಲು ವಿನಿಯೋಗಿಸಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ನಿರ್ಮಾಣಗೊಂಡಿರುವ ರತ್ನತ್ರಯ ಜಿನಮಂದಿರ ವಾಸ್ತು ವಿಧಾನ ಮತ್ತು ಶಾಂತಿ ತೀರ್ಥಂಕರರ ಲಘು ಪಂಚಕಲ್ಯಾಣ ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಸಾಂಸ್ಕೃತಿಕ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಪೀಠಾಧಿಕಾರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಶಾಂತಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಪುಸ್ತಕಗಳು, ದವಸ, ಧಾನ್ಯವನ್ನು ದಾನ ಮಾಡಲಾಗುತ್ತಿದೆ’ ಎಂದು ತಿಳಿಸಿದರು. ಮುನಿವರ್ಯ ಜ್ಞಾನ ಸಾಗರ ಮಹಾರಾಜರು, ಶ್ರುತಸಾಗರ ಮಹಾರಾಜರು, ಶಿವಸಾಗರ ಮಹಾ ರಾಜರು, ಧರ್ಮಸಾಗರ ಮಹಾರಾಜರು, ಜಿನಸೇನ ಭಟ್ಟಾರಕ ಸ್ವಾಮೀಜಿ, ಶಿವಮತಿ ಮಾತಾಜಿ, ಲಕ್ಷ್ಮೀ ಸೇನ ಭಟ್ಟಾರಕ ಸ್ವಾಮೀಜಿ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ವೃಷಭಸೇನ ಭಟ್ಟಾರಕ ಸ್ವಾಮೀಜಿ, ಧರ್ಮಕೀರ್ತಿ ಭಾಗವಹಿಸಿದ್ದರು. ಡೊಳ್ಳು ಕುಣಿತ, ಸೋಬಾನೆ ಪದ, ಗಮಕ, ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.