ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್, ಮಂಗಳವಾರ ತನ್ನ ಹಣಕಾಸು ನೀತಿಯ ತೃತೀಯ ತ್ರೈಮಾಸಿಕದ ಪರಾಮರ್ಶೆ ನಡೆಸಲಿದ್ದು, ತನ್ನ ನೀತಿ ನಿರೂಪಣಾ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಗಳೇ ಹೆಚ್ಚಿಗೆ ಕಂಡು ಬರುತ್ತಿವೆ.
ತಯಾರಿಕಾ ಸರಕುಗಳ ಹಣದುಬ್ಬರವು ಇನ್ನೂ ಗರಿಷ್ಠ ಮಟ್ಟದಲ್ಲಿಯೇ ಇರುವುದರಿಂದ ಕೇಂದ್ರೀಯ ಬ್ಯಾಂಕ್, ಬಡ್ಡಿ ದರಗಳನ್ನು ತಗ್ಗಿಸುವ ಗೋಜಿಗೆ ಹೋಗಲಿಕ್ಕಿಲ್ಲ ಎಂಬುದು ದೇಶಿ ಕೈಗಾರಿಕಾ ರಂಗದ ನಿರೀಕ್ಷೆಯಾಗಿದೆ.ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ಬಡ್ಡಿ ದರಗಳನ್ನು ಕಡಿಮೆ ಮಾಡಬೇಕು ಎಂದು ಕೈಗಾರಿಕಾ ವಲಯವು ಒತ್ತಾಯಿಸುತ್ತಿದೆ. ಡಿಸೆಂಬರ್ ತಿಂಗಳ ಪರಾಮರ್ಶೆಯಲ್ಲಿ, `ಆರ್ಬಿಐ~ ಅದುವರೆಗೆ ಪಾಲಿಸಿಕೊಂಡು ಬಂದಿದ್ದ ತನ್ನ ಕಠಿಣ ಹಣಕಾಸು ನೀತಿಗೆ ಮೊದಲ ಬಾರಿಗೆ ತಡೆ ಒಡ್ಡಿತ್ತು. ಹಣದುಬ್ಬರ ಕಡಿಮೆಯಾದರೆ ಮುಂದಿನ ತ್ರೈಮಾಸಿಕದ ಹೊತ್ತಿಗೆ ಬಡ್ಡಿ ದರ ಕಡಿಮೆ ಮಾಡುವುದಾಗಿಯೂ ಇಂಗಿತ ವ್ಯಕ್ತಪಡಿಸಿತ್ತು.
ಆಶಾವಾದಿಯಾಗಿಲ್ಲ: ಬಡ್ಡಿ ದರಗಳು ಕಡಿಮೆಯಾಗುವ ಮತ್ತು ನಗದು ಮೀಸಲು ಅನುಪಾತ ತಗ್ಗಿಸುವ ಸಾಧ್ಯತೆಗಳ ಬಗ್ಗೆ ನಾನು ಹೆಚ್ಚು ಆಶಾವಾದಿಯಾಗಿಲ್ಲ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಅಧ್ಯಕ್ಷ ಪ್ರತೀಪ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.ಸರ್ಕಾರಿ ಸ್ವಾಮ್ಯದ ಇತರ ಬ್ಯಾಂಕ್ಗಳ ಮುಖ್ಯಸ್ಥರು ಕೂಡ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.