ಕಾರವಾರ: ಗಿಲ್ನೆಟ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮುಂಬೈ ನೌಕಾದಳದ ಸಿಬ್ಬಂದಿಯೊಬ್ಬರ ಕುತ್ತಿಗೆಗೆ ಆಕಸ್ಮಿಕವಾಗಿ ಬಲೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಮುದುಗ ಬಂದರು ಬಳಿ ನಡೆದಿದೆ.
ತಾಲ್ಲೂಕಿನ ಹಳೆ ಮುದುಗ ಗ್ರಾಮದ ನಿವಾಸಿ ನಿತಿನ್ ವೆಂಕಟೇಶ್ ತಾಂಡೇಲ್ (27) ಮೃತಪಟ್ಟವರು. ಮುಂಬೈ ನೌಕಾದಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸಮಯದಲ್ಲಿ ಚಿಕ್ಕಪ್ಪ ನಾಗಪ್ಪ ಅವರ ಜೊತೆಯಲ್ಲಿ ಗಿಲ್ನೆಟ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಬಲೆ ಬೀಸುವ ಸಂದರ್ಭದಲ್ಲಿ ಅವರ ಕಾಲಿಗೆ ಬಲೆ ಸುತ್ತಿಕೊಂಡು ಆಯತಪ್ಪಿ ಬಿದ್ದಿದ್ದಾರೆ. ಬಲೆ ಅವರ ಕುತ್ತಿಗೆಯನ್ನೂ ಸುತ್ತಿಕೊಂಡಾಗ ಅವರಿಗೆ ಉಸಿರುಗಟ್ಟಿದೆ. ಕೂಡಲೇ ಅವರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದೆ. ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಕಾರವಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.