ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಿ ವಟಗುಟ್ಟುತ್ತಿದೆ

ಅಕ್ಷರ ಗಾತ್ರ

ಕಲ್ಯಾಣಪ್ಪ ಮರಳುಗಾಡಿನ ಮಹಾ ಋಷಿ ಗುರು ಆಲ್-ಹಾಲ್ ಅವರ ಆಶ್ರಮದಲ್ಲಿದ್ದಾಗ ನಡೆದ ಘಟನೆಯಿದು. ಇದನ್ನು ಕಲ್ಯಾಣಪ್ಪ ಯಾರಿಗಾದರೂ ಹೇಳಿದ್ದಾನೆಯೇ ಎಂಬುದರ ಕುರಿತಂತೆ ಸ್ಪಷ್ಟವಾದ ದಾಖಲೆಗಳಿಲ್ಲ.

ಆದರೆ ಗುರು ಆಲ್-ಹಾಲ್‌ರ ಪ್ರಿಯ ಶಿಷ್ಯನಾದ ಟಾ-ರಸ ಹಲವು ಬಾರಿ ಈ ಘಟನೆಯನ್ನು ತನ್ನ ಶಿಷ್ಯರೊಂದಿಗೆ ಹಂಚಿಕೊಂಡಿದ್ದಾನೆ.

ಮರುಭೂಮಿಯಲ್ಲಿದ್ದ ಆಶ್ರಮದ ಮೇಲಿನ ಬಾವುಟಕ್ಕೆ ಕೇವಲ ಸಾಂಕೇತಿಕ ಮಹತ್ವವಷ್ಟೇ ಇರಲಿಲ್ಲ. ಅದು ಪಟಗುಟ್ಟಲು ಆರಂಭಿಸಿತೆಂದರೆ ಒಂದು ದೊಡ್ಡ ಗಾಳಿಯ ಮುನ್ಸೂಚನೆ.

ಒಂದು ದಿನ ಆಲ್-ಹಾಲ್ ಗುರುಗಳ ಶಿಷ್ಯರೆಲ್ಲರೂ ಧ್ಯಾನದ ಅಭ್ಯಾಸದಲ್ಲಿದ್ದರು. ಆಗ ಆಶ್ರಮದ ಬಾವುಟ ಪಟಪಟಿಸಲು ಆರಂಭಿಸಿತು. ಆಗಷ್ಟೇ ಧ್ಯಾನದ ಅಭ್ಯಾಸಕ್ಕೆ ತೊಡಗಿದ್ದ ಶಿಷ್ಯ ಹೊರಗೋಡಿ ಬಂದು `ಬಾವುಟ ಪಟಪಟಿಸುತ್ತಿದೆ~ ಎಂದ. ಹಲವು ವರ್ಷಗಳಿಂದ ಅಲ್ಲಿದ್ದ ಶಿಷ್ಯ ಹೇಳಿದ, `ಗಾಳಿ ಪಟಪಟಿಸುತ್ತಿದೆ~.
 
ಅಷ್ಟು ಹೊತ್ತಿಗೆ ಧ್ಯಾನವನ್ನು ಬೋಧಿಸುತ್ತಿದ್ದ ಶಿಕ್ಷಕರು ಹೇಳಿದರು, `ಮನಸ್ಸು ಪಟಪಟಿಸುತ್ತಿದೆ~. ಈ ಹೊತ್ತಿಗೆ ಹೊರಗೆ ಸುಮ್ಮಗೆ ಕುಳಿತಿದ್ದ ಕಲ್ಯಾಣಪ್ಪ ಹೇಳಿದ- `ಬಾಯಿ ವಟಗುಟ್ಟುತ್ತಿದೆ~.

ಅರ್ಧ ತುಂಬಿದ/ಖಾಲಿ ಗ್ಲಾಸು

ನವರಂಗ್ ಬಾರ್‌ನ ಕೌಂಟರ್‌ನಲ್ಲಿ ಅರ್ಧ ತುಂಬಿದ ಬಿಯರ್ ಗ್ಲಾಸ್ ಇಟ್ಟುಕೊಂಡು ಯುವಕನೊಬ್ಬ ಚಿಂತಾಕ್ರಾಂತನಾಗಿದ್ದ. ಕಲ್ಯಾಣಪ್ಪ ಅವನೆದುರು ಕುಳಿತು ಏನಾಯಿತು ಎಂದು ವಿಚಾರಿಸಿದ.

ಆ ಯುವಕ `ನನ್ನ ಬದುಕು ಹೀಗಾಗಿ ಬಿಟ್ಟಿದೆ~ ಎಂದು ಅರ್ಧ ತುಂಬಿದ ಬಿಯರ್ ಗ್ಲಾಸ್ ತೋರಿಸಿದ. ಕಲ್ಯಾಣಪ್ಪ ಪ್ರಶ್ನಾರ್ಥಕವಾಗಿ ಅವನತ್ತ ನೋಡಿದ.

ಆ ಯುವಕ ತತ್ವಜ್ಞಾನಿಯ ಉತ್ಸಾಹದಲ್ಲಿ ವಿವರಿಸಿದ, `ನನ್ನ ಬದುಕು ಈ ಗ್ಲಾಸಿನಂತೆ ಅರ್ಧ ತುಂಬಿದೆಯೋ ಅಥವಾ ಅರ್ಧ ಖಾಲಿ ಇದೆಯೋ ಎಂದು ಅರ್ಥವಾಗುತ್ತಿಲ್ಲ~.
ಕಲ್ಯಾಣಪ್ಪ ಹೇಳಿದ `ಅದೆರಡೂ ಅಲ್ಲ. ಈ ಗ್ಲಾಸಿಗೆ ಬಿಯರಿನಿಂದಷ್ಟೇ ತನ್ನನ್ನು ತುಂಬಿಸಿಕೊಳ್ಳಲು ಸಾಧ್ಯವಿಲ್ಲ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT