ತಿಪಟೂರು: ನಗರದಲ್ಲಿ ಮಂಗಳವಾರ ಸಂಜೆ ಬಿರುಗಾಳಿಯೊಂದಿಗೆ ಮಳೆ ಸುರಿಯಿತು. ಜೋರಾಗಿ ಬೀಸಿದ ಮಳೆಗಾಳಿಗೆ ನಗರದ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗುರುಳಿದವು. ಇದರಿಂದ ವಿದ್ಯುತ್ ಪೂರೈಕೆ ಜಾಲ ಕಡಿತಗೊಂಡಿದ್ದು, ನಗರ ಕತ್ತಲಲ್ಲಿ ಮುಳುಗಿತು.
ಗಾಳಿಯಿಂದ ಮಳೆ ಸ್ಥಗಿತಗೊಂಡರೂ; ನಗರದ ವಿವಿಧೆಡೆ ಮರಗಳು ಉರುಳು ಬಿದ್ದಿವೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಮಾರುಕಟ್ಟೆ ಮೈದಾನದಲ್ಲಿ ನಿರ್ಮಿಸುತ್ತಿದ್ದ ಶೆಡ್ಗಳ ತಗಡು ಗಾಳಿಗೆ ಹಾರಿ ಹೋಗಿವೆ.
ಬಿಎಸ್ವೈ ಪ್ರಯಾಣಕ್ಕೆ ಮಳೆ ಅಡ್ಡಿ
ತಾಲ್ಲೂಕಿನ ಬಿದರೆಗುಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತುರ್ತಾಗಿ ಬೆಂಗಳೂರಿಗೆ ಹೋಗಬೇಕಿದೆ ಎಂದು ತರಾತುರಿಯಲ್ಲಿ ಭಾಷಣ ಮುಗಿಸಿ ಸಭೆಯಿಂದ ನಿರ್ಗಮಿಸಿದರು.
ಆದರೆ ಅವರಿಗೆ ಸಕಾಲದಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿಲ್ಲ. ಬಿದರೆಗುಡಿಯಿಂದ ಹೆಲಿಪ್ಯಾಡ್ಗೆ ಕಾರಿನಲ್ಲಿ ಪ್ರಯಾಣ ಬೆಳಸಿ ಹೆಲಿಕಾಪ್ಟರ್ ಹತ್ತಿದರು. ಇನ್ನೇನು ಹೆಲಿಕಾಪ್ಟರ್ ಮೆಲಕ್ಕೆ ಹಾರಬೇಕೆನ್ನುವಷ್ಟರಲ್ಲಿ ಭಾರಿ ಗಾಳಿ-ಮಳೆ ಬೀಸಿದ್ದರಿಂದ ಹಾರಾಟ ಸ್ಥಗಿತಗೊಳಿಸಲಾಯಿತು.
ಮಳೆ ನಡುವೆ 30 ನಿಮಿಷ ಯಡಿಯೂರಪ್ಪ ಹೆಲಿಕಾಫ್ಟರ್ನಲ್ಲೇ ಕಾಲ ಕಳೆದರು.
ಸಂಜೆಯಾಗಿ ಕತ್ತಲು ಆವರಿಸಿದ ಕಾರಣ ಪೈಲೆಟ್ ಕಸಿವಿಸಿಗೊಂಡರು. ತುಂತುರು ಮಳೆ ಇದ್ದಂತೆ ಸುರಕ್ಷಿತವಾಗಿ ಟೇಕಾಫ್ ಮಾಡಿ ಬೆಂಗಳೂರಿಗೆ ಪ್ರಯಾಣ ಬೆಳಸಿದರು.