ನವದೆಹಲಿ (ಪಿಟಿಐ): ಅಸ್ಸಾಂನಲ್ಲಿ ವರುಣನ ಆರ್ಭಟದಿಂದ ಜನ ತತ್ತರಿಸಿಹೋಗಿದ್ದರೆ, ಇತ್ತ ಉತ್ತರ ಭಾರತದಾದ್ಯಂತ ಬಿಸಿಗಾಳಿಯ ಪ್ರಖರತೆ ಮತ್ತಷ್ಟು ಹೆಚ್ಚಿದ್ದು, ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ರಾಜಸ್ತಾನದ ಚುರು ಪಟ್ಟಣದಲ್ಲಿ ಮಂಗಳವಾರ ಉಷ್ಣಾಂಶ 48.6 ಡಿಗ್ರಿ ಸೆಲ್ಸಿಯಸ್ಗೆ ಏರಿದ್ದು ದಾಖಲೆಯಾಗಿದೆ. ಉತ್ತರ ಭಾರತದಲ್ಲಿ ಮುಂಗಾರು ವಿಳಂಬವಾಗುತ್ತಿರುವಂತೆಯೇ ಬಿಸಿಲಿನ ಝಳದಿಂದ ಜನ ನಲುಗುವಂತಾಗಿದೆ.
ರಾಜಸ್ತಾನದ ರಾಜಧಾನಿ ಜೈಪುರ ಸೇರಿದಂತೆ ಹಲವು ಕಡೆ ನೆತ್ತಿಸುಡುವ ಬಿಸಿಲಿನಿಂದ ಜನಜೀವನವೇ ಅಸ್ತವ್ಯಸ್ತಗೊಂಡಿದ್ದು ಅಲ್ಲಿಯ ಶಾಲೆಗಳ ರಜಾ ಅವಧಿಯನ್ನು ಈಗಾಗಲೆ ವಿಸ್ತರಿಸಲಾಗಿದೆ. ಚುರುವಿನಲ್ಲಿ ಇದೀಗ ದಾಖಲಾದ ಉಷ್ಣಾಂಶ ಕಳೆದ 30 ವರ್ಷಗಳಲ್ಲೇ ಅಧಿಕ ಎನ್ನಲಾಗಿದೆ. ಜೈಪುರದಲ್ಲಿ 43.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲೂ ಬಿಸಿಗಾಳಿ ಬೀಸುತ್ತಿದ್ದು ರಾಜ್ಯದ ಬಂಡ್ಲಾದಲ್ಲಿ ಗರಿಷ್ಠ 45.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಪಂಜಾಬ್, ಹರಿಯಾಣ ಹಾಗೂ ಬಿಹಾರ ರಾಜ್ಯಗಳಲ್ಲೂ ವರುಣನ ಪ್ರವೇಶವಾಗದ ಪರಿಣಾಮ ಬಿಸಿಲಿನ ತಾಪಕ್ಕೆ ಜನ ತತ್ತರಿಸಿಹೋಗಿದ್ದಾರೆ.