ನವದೆಹಲಿ: ಬೆಂಗಳೂರಿನ ಯುವತಿಯೊಬ್ಬಳನ್ನು ಇಲ್ಲಿನ ಜಿ.ಬಿ. ರಸ್ತೆಯಲ್ಲಿರುವ ವೇಶ್ಯಾವಾಟಿಕೆ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನಿಂದ ಕರೆತಂದಿದ್ದ 23 ವರ್ಷ ವಯಸ್ಸಿನ ಯುವತಿಯನ್ನು ಇಲ್ಲಿನ ವೇಶ್ಯಾಗೃಹಕ್ಕೆ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಿರುವ `ಶಕ್ತಿ ವಾಹಿನಿ' ಸ್ವಯಂ ಸೇವಾ ಸಂಸ್ಥೆಯ ಸಹಾಯದಿಂದ ಈ ಯುವತಿಯನ್ನು ರಕ್ಷಿಸಲಾಗಿದೆ.
ಮಾನವ ಕಳ್ಳಸಾಗಣೆದಾರರ ಹಿಡಿತಕ್ಕೆ ಸಿಲುಕಿದ್ದ ಈ ಯುವತಿಯು ಬಡ ಕುಟುಂಬದವಳಾಗಿದ್ದು, ಈಕೆಗೆ ದುಡ್ಡಿನ ಆಮಿಷ ಮತ್ತು ದೆಹಲಿಯಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಬೆಂಗಳೂರಿನ ಮಹಿಳೆಯೊಬ್ಬರು ಪ್ರಲೋಭ ಒಡ್ಡಿದ್ದರು. ದೆಹಲಿಗೆ ಕರೆತಂದು ಯುವತಿಯನ್ನು ವೇಶ್ಯಾಗೃಹದ ಮಾಲೀಕರೊಬ್ಬರಿಗೆ ಮಾರಾಟ ಮಾಡಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.