ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಭಿವೃದ್ಧಿ: ಚುರುಕುತನದ ಕೊರತೆ

Last Updated 19 ಫೆಬ್ರುವರಿ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲ, ಭಾರತದ ಮಹಾನಗರಗಳಲ್ಲಿ ಒಂದಾಗಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆ ಹೊಂದಿದೆ. ಕಳೆದ ಕೆಲವು ದಶಕಗಳಲ್ಲಿ ಬೃಹದಾಕಾರವಾಗಿ ಬೆಳೆದು, ಈಗ ಒಂದು ಕೋಟಿ ಜನಸಂಖ್ಯೆ ಮೀರಿದೆ.

ನಮ್ಮ ರಾಜ್ಯದ ಒಟ್ಟು ಉತ್ಪಾದನೆ (ಜಿಡಿಪಿ) ಗೆ ಬೆಂಗಳೂರಿನ ಕೊಡುಗೆ ಶೇ 60 ರಷ್ಟು, ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ಇದರ ಭಾಗ ಶೇ 30 ರಷ್ಟು.  ತಂಪಾದ ಹವಾಮಾನ ಹಾಗೂ ಉತ್ತಮ ಮಾನವ ಸಂಪನ್ಮೂಲ ಇಲ್ಲಿದೆ. ಇಷ್ಟೆಲ್ಲಾ ಅನುಕೂಲಗಳನ್ನು ಹೊಂದಿದ್ದು ಇತ್ತೀಚಿನ ವರ್ಷಗಳಲ್ಲಿ ನಗರದ ಮೂಲಭೂತ ಸೌಕರ್ಯಗಳು ಕ್ಷೀಣಿಸಿ ಬೆಂಗಳೂರಿನ ಹೆಸರು ಮತ್ತು ಆಕರ್ಷಣೆ ಕುಂಠಿತವಾಗಿರುವುದು ಶೋಚನೀಯ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬೆಂಗಳೂರಿನ ಸಮಸ್ಯಗಳಿಗೆ ಪರಿಹಾರ ಸಿಗಬಹುದೆಂಬುದು ಜನರ ನಿರೀಕ್ಷೆಯಾಗಿತ್ತು. ಸರ್ಕಾರವು ಈಗ 1000 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಇದರ ಸಾಧನೆಗಳನ್ನು ಪರಿಶೀಲಿಸುವುದು ಸೂಕ್ತವಾಗಿದೆ. ಬಿಬಿಎಂಪಿಯ ಅವಧಿ ಎಪ್ರಿಲ್ 2015 ರಲ್ಲಿ ಪೂರ್ಣಗೊಳ್ಳಲಿರುವ ಕಾರಣ ನಗರಪಾಲಿಕೆಯ ಚುನಾವಣೆಗೆ ಸಜ್ಜಾಗುವುದು ಸಿದ್ದರಾಮಯ್ಯನವರ ಮೊದಲ ಜವಾಬ್ದಾರಿ ಆಗಿತ್ತು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗಿಯೂ ಪರಿಣಮಿಸಿತು.

ಆದರೆ ಸರ್ಕಾರ ಮಾಡಿದ್ದಾದರೂ ಏನು? ಚುನಾವಣೆಯನ್ನು ಮುಂದೂಡಲು ಕಾರಣಗಳನ್ನು ಹುಡುಕತೊಡಗಿತು. ಬೆಂಗಳೂರು ಬಹು ದೊಡ್ಡದಾಗಿ ಬೆಳೆದಿದ್ದು ಆಡಳಿತ ನಡೆಸುವುದು ಕಷ್ಟವಾಗಿರುವ ಕಾರಣ ಬಿಬಿಎಂಪಿಯನ್ನು ಸಣ್ಣ ನಗರ ಪಾಲಿಕೆಗಳಾಗಿ ವಿಂಗಡಿಸುವುದು ಸೂಕ್ತವೆಂದು ಭಾವಿಸಿ ಇದನ್ನು ಪರಿಶೀಲಿಸಲು ಒಂದು ತಜ್ಞರ ಸಮಿತಿಯನ್ನು ರಚಿಸಲಾಯಿತು. ಚುನಾವಣೆ ಸೂಕ್ತ ಕಾಲಕ್ಕೆ ನಡೆಸದ ವಿಷಯ ನ್ಯಾಯಲಯದಲ್ಲಿ ಪ್ರಶ್ನಿಸಲಾಯಿತು ಹಾಗೂ ಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ಚುನಾವಣೆ ಆಗಸ್ಟ್ 2015 ರಲ್ಲಿ ನಡೆಸಲಾಯಿತು.

ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಿತು. ಆದರೆ ಸಂಸತ್ ಹಾಗೂ ವಿಧಾನ ಮಂಡಲದ ಸದಸ್ಯರ ಸಂಖ್ಯಾ ಬಲದಿಂದ ಕಾಂಗ್ರೆಸ್‌ಗೆ ಬಿಬಿಎಂಪಿಯಲ್ಲಿ ಆಡಳಿತ ಚುಕ್ಕಾಣಿ ಲಭ್ಯವಾಯಿತು. ರಾಜ್ಯ ಸರ್ಕಾರ ಮತ್ತು ಮಹಾನಗರಪಾಲಿಕೆಯಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿರುವ ಕಾರಣ ನಗರದ ವ್ಯವಹಾರಗಳು ಉತ್ತಮ ಗೊಳ್ಳಬಹುದೆಂದು ಜನ ಭಾವಿಸಿದ್ದರು. ಆದರೆ ನಿರೀಕ್ಷಿಸಿದ ಪ್ರಗತಿ ಆಗಿಲ್ಲವೆಂದೇ ಹೇಳಬೇಕು.

ಬೆಂಗಳೂರಿನ ಪ್ರಮುಖ ಸಮಸ್ಯೆಗಳು:
* ನೈರ್ಮಲ್ಯ ಮತ್ತು ತ್ಯಾಜ್ಯ ವಸ್ತುವಿನ ನಿರ್ವಹಣೆ
* ವಾಹನ ಸಂಚಾರದ ಒತ್ತಡ
* ರಸ್ತೆ ಮತ್ತು ಪಾದಚಾರಿ ಮಾರ್ಗದ ಸುಧಾರಣೆ
* ಸುಸ್ಥಿರವಾದ ನೀರಿನ ವ್ಯವಸ್ಥೆ, ಮುಖ್ಯವಾಗಿ ಬಿಬಿಎಂಪಿಯಲ್ಲಿ ಹೊಸದಾಗಿ ವೀಲಿನಗೊಂಡ ಹಳ್ಳಿಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ
*ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿ ಸೌಕರ್ಯ, ವಿಶೇಷವಾಗಿ ಬಡಜನರಿಗೆ ಮನೆ ಒದಗಿಸುವುದು
*  ಪರಿಸರ ರಕ್ಷಣೆ
ಈ ಸವಾಲುಗಳನ್ನು ಸರ್ಕಾರ ಯಾವ ರೀತಿ ಎದುರಿಸಿದೆ ಎಂಬುದನ್ನು ಪರಿಶಿಲಿಸೋಣ.

ಸರ್ಕಾರ ತೆಗೆದುಕೊಂಡಿರುವ ಒಂದು ಮುಖ್ಯವಾದ ಹೆಜ್ಜೆಯೆಂದರೆ ಘನತ್ಯಾಜ್ಯ ಸಮಸ್ಯೆ ಬಗೆಹರಿಸಲು ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಿರುವುದು. ಇವು ಪೂರ್ಣಗೊಂಡಾಗ ಕಸವನ್ನು ಮಂಡೂರು, ಮಳವಳ್ಳಿಯಂತಹ ಕಡೆ ಸಾಗಿಸುವುದನ್ನು ತಡೆಯಲು ಸಾಧ್ಯವಾಗುವುದು. ಅದೂ ಅಲ್ಲದೆ ಕಸವನ್ನು ಗೊಬ್ಬರವಾಗಿ ಪರಿವರ್ತಿಸ­ಲಾಗುವುದು. ಆದರೆ ಮೂಲ ಹಂತದಲ್ಲಿ ಕಸ ವಿಂಗಡಣೆ ಸರಿಯಾಗಿ ಆಗುತ್ತಿಲ್ಲ ಹಾಗೂ ಜನರು ಕಸವನ್ನು ಬೀದಿ ಹಾಗೂ ಚರಂಡಿಗಳಲ್ಲಿ ಎಸೆಯುವುದರಿಂದ ನಗರದ ಅನೇಕ ಭಾಗಗಳಲ್ಲಿ ಸ್ವಚ್ಛತೆ ಕಂಡುಬರುವುದಿಲ್ಲ.

ಬೆಂಗಳೂರಿನ, ರಸ್ತೆಗಳ ಸ್ಥಿತಿ ಚಿಂತಾಜನಕ­ವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಗುಂಡಿಗಳ ಕಾಟ ಇನ್ನೂ ತಪ್ಪಿಲ್ಲ, ರಸ್ತೆ, ಪಾದಚಾರಿ ಮಾರ್ಗಗಳ ಗುಣಮಟ್ಟ ಉತ್ತಮಗೊಳಿಸಲು ತಯಾರಿಸಿದ ಟೆಂಡರ್‌ಶೂರ್ ರಸ್ತೆಗಳ ಯೋಜನೆಗೆ ಹಿಂದಿನ ಸರ್ಕಾರವೇ ಅನುಮೋದನೆ ನೀಡಿತ್ತು. ಕೆಲಸ ಈಗ ಪ್ರಾರಂಭವಾಗಿರುವುದು ಸ್ವಾಗತಾರ್ಹ.

ವಾಹನ ಸಂಚಾರದ ವ್ಯವಸ್ಥೆಯಂತೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಕಳೆದ 5 ವರ್ಷಗಳಲ್ಲಿ ಪೀಕ್ ಅವರ್ಸ್ ಬಸ್ ಸಂಚಾರದ ವೇಗ ಗಂಟೆಗೆ 20 ಕಿ.ಮೀ. ನಿಂದ 9 ಕಿ.ಮೀ. ಗೆ ಇಳಿದಿದೆ. ವಾಹನ ನಿಲುಗಡೆಯ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ದಿನೇ ದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಒಂದು ಕಾರಣವಾಗಿರಬಹುದು. ಆದರೆ ಈ ವಿಷಯದ ಬಗ್ಗೆ ಸೂಕ್ತ ಕ್ರಮಗಳು ತಗೆದುಕೊಳ್ಳಲು ಸರ್ಕಾರ ವಿಫಲವಾಗಿದೆ. ಉದಾಹರಣೆಗೆ ಸಾರ್ವಜನಿಕ ಸಾರಿಗೆಯತ್ತ ಸಾಕಷ್ಟು ಗಮನ ಹರಿಸಿಲ್ಲ.

ಬಿಎಂಟಿಸಿ ಬಸ್ಸುಗಳ ಸಂಖ್ಯೆ ಹೆಚ್ಚಿಸಲು ಸೂಕ್ತ ಕ್ರಮ ತಗೆದುಕೊಂಡಿಲ್ಲ. 2015–16 ಇಸವಿಯಲ್ಲಿ ಹೊಸ ಬಸ್ಸುಗಳ ಖರೀದಿಗೆ ಹಣವನ್ನೇ ಒದಗಿಸಿಲ್ಲ. ರಸ್ತೆಗಳ ಮೇಲೆ ಖಾಸಗಿ ವಾಹನಗಳ ಸಂಚಾರ ನಿಯಂತ್ರಿಸಲು ಫ್ಲೈಒವರ್ ಗಳನ್ನು  ಕಟ್ಟುವ ಬದಲು ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವುದು ಅತ್ಯವಶ್ಯಕ. ಮೆಟ್ರೋ ರೈಲಂತೂ ಮಂದಗತಿಯಲ್ಲಿ ಸಾಗುತ್ತಿದೆ. ಸ್ವಸ್ತಿಕ್ - ಪೀಣ್ಯ ರೈಲು ಮಾರ್ಗ ಪ್ರಾರಂಭವಾಗಿದೆ ನಿಜ. ಆದರೆ ಮೆಟ್ರೋ ನಿರ್ಮಾಣ ಪ್ರಗತಿ ಚುರುಕುಗೊಳಿಸಬೇಕು.

ಬೆಂಗಳೂರು ಜನರಿಗೆ ನೀರು ಸಾಕಷ್ಟು ಪ್ರಾಮಾಣದಲ್ಲಿ ಸಿಗುತ್ತಿಲ್ಲ. ರಾಷ್ಟ್ರೀಯ ಮಾನದಂಡಗಳ ಪ್ರಕಾರ ಮಹಾನಗರಗಳಿಗೆ ಪ್ರತಿದಿನ ತಲಾ 150 ಲೀಟರ್  ಒದಗಿಸಬೇಕು. ಆದರೆ ಈಗ ಒದಗಿಸುತ್ತಿರುವುದು ಸುಮಾರು 100-110 ಲೀಟರ್. ಕಾವೇರಿ 4ನೇ ಹಂತ ಯೋಜನೆ ಪೂರ್ಣಗೊಂಡಿದ್ದು 5ನೇ ಹಂತದ ಯೋಜನೆಗೆ ತಯಾರಿ ನಡೆಯುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 10 ಟಿಎಂಸಿ ನೀರು ಒದಗಿಸಿದೆ. ಆದರೆ ಇದೊಂದು ದೀರ್ಘಾವದಿ ಯೋಜನೆ. ನೀರಿನ ಸಮಸ್ಯೆ ಬಗೆಹರಿಸಲು ಕೇವಲ ನದಿ ಮೂಲದ ಸರಬರಾಜಿನ ಮೇಲೆ ಆಧಾರ ಪಡದೆ ಇತರ ಕ್ರಮಗಳನ್ನು  ತಗೆದುಕ್ಕೋಳ್ಳಬೇಕು.

ನೀರು ಮಂಡಳಿ ಸರಬರಾಜು ಮಾಡುತ್ತಿರುವ 1400 ದಶಲಕ್ಷ ಲೀಟರ್ ಗಳಲ್ಲಿ ಶೇ 45 ರಷ್ಟು ನಷ್ಟವಾಗುತ್ತಿದೆ (ಸೋರುವಿಕೆ, ಇತ್ಯಾದಿ). ಈ ಪ್ರಮಾಣವನ್ನು ಶೇ 15ಕ್ಕೆ ಇಳಿಸಿದಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತದೆ. ಅದೇ ರೀತಿ ಮಳೆ ನೀರಿನ ಸಂಗ್ರಹ ಹಾಗೂ ವ್ಯರ್ಥವಾಗುವ ನೀರಿನ ಪುನರ್ ಬಳಕೆಗೂ ಸಿಂಗಪುರ, ಕಾಂಬೋಡಿಯ ದೇಶಗಳ ಮಾದರಿಯಲ್ಲಿ ಕ್ರಮ ತಗೆದುಕೊಳ್ಳಬೇಕು. ಬಿಬಿಎಂಪಿ ಯಲ್ಲಿ ಹೊಸದಾಗಿ ಸೇರಿರುವ 110 ಹಳ್ಳಿಗಳಲ್ಲಿ ಪ್ರತಿ ವರ್ಷ ಕೊಳವೆ ಬಾವಿಗಳನ್ನು ತೋಡುವುದು ನಿಲ್ಲಿಸಿ ಸಮರ್ಪಕ ನೀರು ಮತ್ತು ಒಳಚರಂಡಿ ವ್ಯವಸ್ಥೆ ಮಾಡಾಬೇಕಾಗಿದೆ. ಇದಕ್ಕೆ ಒಂದು ಯೋಜನೆಯಂತೂ ತಯಾರಾಗಿದೆ.

ಜನ ಸಾಮಾನ್ಯರಿಗೆ ವಸತಿ ಸೌಕರ್ಯ ಒದಗಿಸುವುದರಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಬಿಡಿಎ ಕಳೆದ 3 ವರ್ಷಗಳಲ್ಲಿ ಯಾವುದೇ ನಿವೇಶನಗಳನ್ನು  ಹಂಚಿಲ್ಲ. ಕೆಂಪೇಗೌಡ ಬಡಾವಣೆಯ ವಿಚಾರದಲ್ಲಿ ಪ್ರಗತಿಗಿಂತ ಅಡಚಣೆಗಳೇ ಹೆಚ್ಚು. ಇತ್ತೀಚೆಗೆ ಕೇವಲ 3280 ನಿವೇಶನಗಳನ್ನು ಹಂಚಲು ಪ್ರಕಟಣೆ ಹೊರಡಿಸಲಾಗಿದೆ. ಬಹುಮಹಡಿ ಮನೆ ನಿರ್ಮಾಣ ಯೋಜನೆಯಡಿಲ್ಲಿ ಸುಮಾರು 3900 ಮನೆಗಳನ್ನು ಹಂಚಲಾಗಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕೊಳಚೆ ಪ್ರದೇಶದ ಬಡ ನಿವಾಸಿಗಳಿಗಾಗಿ 2013 ರಿಂದ ಹಂಚಿಕೆ ಮಾಡಿದ ಮನೆಗಳ ಸಂಖ್ಯೆ 3990.

ಬೆಂಗಳೂರಿನಲ್ಲಿ ವಸತಿಯ ಬೇಡಿಕೆಗೆ ಹೋಲಿಸಿದರೆ ಸರ್ಕಾರದ ಸಾಧನೆ ತೀರಾ ಕಡಿಮೆ. ಬಿಡಿಎಗೆ ಸಂಬಂಧಿಸಿದ ಒಂದು ದೌರ್ಭಾಗ್ಯದ ವಿಷಯವೆಂದರೆ ಡಿನೋಟಿಫಿಕೇಶನ್. ಕಳೆದ 12 ವರ್ಷಗಳಿಂದ ಎಲ್ಲಾ ಸರ್ಕಾರಗಳೂ ಇದರಲ್ಲಿ ಭಾಗಿ. ವಿಚಿತ್ರವೆಂದರೆ ಈಗಾಗಲೇ ಹಂಚಿಕೆಯಾಗಿ ಸ್ವಾಧೀನಕ್ಕೆ ತೆಗೆದುಕೊಂಡಿರುವ ನಿವೇಶನಗಳನ್ನೂ ಈಗಿನ ಸರ್ಕಾರ ಡಿನೋಟಿಫೈ ಮಾಡಿದೆ. ಅರ್ಕಾವತಿ ಬಡಾವಣೆ ವಿಷಯ ಎಲ್ಲರಿಗೂ ತಿಳಿದ ವಿಷಯ. 2003ರಲ್ಲಿ ಪ್ರಾರಂಭಗೊಂಡ ಯೋಜನೆಯಡಿ ಈವರೆಗೂ ಹಂಚಿಕೆಯಾಗಿರುವುದು ಕೇವಲ 5000 ನಿವೇಶನಗಳು. 3839 ಎಕರೆ ಸ್ವಾಧೀನ ಪಡೆಸಿಕ್ಕೊಳ್ಳಲು ಅಧಿಸೂಚನೆ ಹೊರಡಿಸಿದ್ದು ಅದರ ಪೈಕಿ  ಕೈಬಿಟ್ಟಿದ್ದು 1541 ಎಕರೆ. ಭೂಹಸಿವು ಯಾರನ್ನೂ ಬಿಡದು.

ಬೆಂಗಳೂರಿನ ಪರಿಸರ ಪ್ರತಿದಿನ ಹದಗೆಡುತ್ತಿರುವುದು ಅನುಭವದ ವಿಷಯ. ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಕಳೆದ 4 ವರ್ಷಗಳಲ್ಲಿ ಬೆಂಗಳೂರಿನ ವಾಯು ಮಾಲಿನ್ಯ ಅಧಿಕಗೊಂಡಿದ್ದು ದೂಳಿನ ಕಣಗಳು  (particulate matter)  ಶೇ 57ರಷ್ಟು ಹೆಚ್ಚಳ ಕಂಡುಬಂದಿದೆ. ಇದು ಜನರ ಆರೋಗ್ಯಕ್ಕೆ ಹಾನಿಕರ. ಕೆರೆಗಳ ರಕ್ಷಣೆಯಂತೂ ಒಂದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಕೆಲವೆಡೆ ಕೆರೆ ದಂಡೆಯ ಸುತ್ತಲು ಕೈಗಾರಿಕೆಗಳು ಹಾಗೂ ಬಹುಮಹಡಿ ಕಟ್ಟಡಗಳು ತಲೆ ಎತ್ತಿದ್ದು ಕೆರೆಗಳು ಕಲುಷಿತಗೊಂಡಿರುವುದಲ್ಲದೆ ಸೊಳ್ಳೆಯ ಕಾಟ ಹೆಚ್ಚಾಗಿದೆ. ರಾಜಕಾಲುವೆಗಳಲ್ಲಿ ಹರಿಯುವ ಮಳೆ ನೀರು ಕೊಳಚೆ ನೀರಿನ ಜೊತೆ ಸೇರಿ ಕೆರೆಗಳ ನೀರನ್ನು ಮಲಿನಗೊಳಿಸುತ್ತಿದೆ. ಇದರಿಂದಾಗಿ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಪರಿಸರ ಮಾಲಿನ್ಯ ಜನರ ಆರೋಗ್ಯದ
ಮೇಲೆ ಅಪಾಯಕರ ಪ್ರಭಾವ ಬೀರುವುದರಲ್ಲಿ ಸಂದೇಹವಿಲ್ಲ. ಇದರ ಬಗ್ಗೆ ಶೀಘ್ರ ಎಚ್ಚೆತ್ತುಕೊಳ್ಳಬೇಕಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ನಗರಾಡಳಿತ ದೃಷ್ಟಿಯಿಂದ ನಗರದ ಸಂಸ್ಥೆಗಳು ಬಿಬಿಎಂಪಿ, ಬಿಡಿಎ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ದಕ್ಷತೆ ಕಂಡು ಬಂದಿಲ್ಲ.  ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣವೇನೋ ಒದಗಿಸುತ್ತಾ ಬಂದಿದೆ. ಮೂರು ವರ್ಷಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಪ್ರತಿ ವರ್ಷ ₹ 1000 ಕೋಟಿ ಒದಗಿಸಿದೆ. 14ನೆ ಹಣಕಾಸು ಆಯೋಗ ಅನುದಾನದಲ್ಲಿ ₹ 100 ಕೋಟಿ ಬಿಡುಗಡೆಯಾಗಿದೆ. ಆದರೆ ಹಣವನ್ನು ಜಾಗರೂಕತೆಯಿಂದ ಬಳಸಿಕೊಳ್ಳುವುದೇ ಸವಾಲು. ಕಾಮಾಗಾರಿಗಳ ಅನುಷ್ಠಾನದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯ.

ಯಾವುದೇ ನಗರದ ಸಮಗ್ರ ಅಭಿವೃದ್ಧಿಗೆ ಒಂದು ನಗರ ಯೋಜನೆ ಮುಖ್ಯ. ಬೆಂಗಳೂರಿನ ಪ್ರಸ್ತುತ ಮಾಸ್ಟರ್ ಪ್ಲಾನ್ 2005ರಲ್ಲಿ ತಯಾರಾಗಿದ್ದು. 2015ರಲ್ಲಿ ಹೊಸ ಮಾಸ್ಟರ್ ಪ್ಲಾನ್ ತಯಾರಾಗಿರಬೇಕಾಗಿತ್ತು. ಆದರೆ ಬಿಡಿಎ ಕಳೆದ ಮೂರು ವರ್ಷಗಳಿಂದ ಪರಿಷ್ಕರಣಾ ಕಾರ್ಯದಲ್ಲಿ ತೊಡಗಿದೆ. ಇದನ್ನು ಶೀಘ್ರ ಪೂರ್ಣಗೊಳಿಸುವುದು ಅವಶ್ಯಕ.

ಪ್ರಜಾಪ್ರಭುತ್ವದಲ್ಲಿ ಸ್ಥಳೀಯ ಆಡಳಿತ ಸುಗಮವಾಗಿ ನಡೆಸಿಕೊಂಡು ಹೋಗಲು ಜನರ ಪಾತ್ರ ಬಹು ಮುಖ್ಯ. ಬೆಂಗಳೂರಿನಲ್ಲಿ ಸರ್ಕಾರೇತರ ಮತ್ತು ನಿವಾಸಿ ಸಂಘಗಳು ಚುರುಕಾಗಿವೆ.  ಖಾಸಗಿ ವಲಯವೂ ನಗರಾಭಿವೃದ್ಧಿಯಲ್ಲಿ ಆಸಕ್ತಿ ತೋರುತ್ತಿದೆ. ಈ ಪ್ರಜಾಶಕ್ತಿ ಸಾರ್ಥಕವಾಗಬೇಕಾದರೆ ನಾಗರಿಕ ವಿಕೇಂದ್ರೀಕರಣ ಅವಶ್ಯಕ. ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು ಹಾಗೂ ಪ್ರತಿಯೊಂದು ವಾರ್ಡ್‌ನಲ್ಲೂ ವಾರ್ಡ್ ಸಮಿತಿ ರಚಿಸ ಬೇಕು.

ಒಟ್ಟಾರೆ ಹೇಳಬೇಕಾದರೆ, ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಕೆಲವು ಕ್ರಮಗಳನ್ನು ತಗೆದುಕೊಂಡಿದ್ದರೂ  ಆದ್ಯತೆ ಮತ್ತು ಚುರುಕುತನದ ಕೊರತೆ ಇದೆ. ಆದ ಕಾರಣ ಭಾರತದ ಆಶಾದಾಯಕ ನಗರಾಭಿವೃದ್ಧಿ ಯೋಜನೆಯಾದ ಸ್ಮಾರ್ಟ್ ಸಿಟಿ ಸ್ಪರ್ಧೆಯಲ್ಲಿ ಬೆಂಗಳೂರಿಗೆ ಯಶಸ್ಸು ಸಿಕ್ಕಿಲ್ಲ. ವಿಶ್ವದಲ್ಲೇ ಒಂದು ಟೆಕ್ನಾಲಜಿ ಹಾಟ್‌ಸ್ಪಾಟ್ ಎಂದು ಖ್ಯಾತಿ ಗಳಿಸಿರುವ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲೇ ಕಾಣಿಸಿಕೊಂಡಿಲ್ಲ.

ಮಾನ್ಯ ಮುಖ್ಯ ಮಂತ್ರಿಗಳೇ ಬೆಂಗಳೂರಿನ ಪೂರ್ಣ ಜವಾಬ್ದಾರಿ 2 ವರ್ಷಗಳ ಕಾಲ ಹೊತ್ತಿದ್ದು ಬಹುಶಃ ಅವರಿಗೆ ರಾಜಧಾನಿ ಬಗ್ಗೆ ಸಮಯ ನೀಡುವುದು ಕಷ್ಟವಾಗಿದ್ದಿರಬಹುದು. ಆದರೆ ಈಗ ಬೆಂಗಳೂರಿಗೆ ಒಬ್ಬ ಪ್ರತ್ಯೇಕ ಮಂತ್ರಿಗಳಿದ್ದಾರೆ. ಇತ್ತೀಚೆಗೆ ವಿಶ್ವ ಹೂಡಿಕೆದಾರರ ಜಾಗತಿಕ ಸಮಾವೇಶದಲ್ಲಿ ಭಾರತದಲ್ಲಿ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ಎಂದು ಘೋಷಿಸಿದ ಮುಖ್ಯಮಂತ್ರಿಗಳು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ಒಂದು ಕಾಲಮಿತಿಯಲ್ಲಿ ಉತ್ತಮಗೊಳಿಸಲು ಸೂಕ್ತ ಕ್ರಮ ತೆಗೆದುಕ್ಕೊಳ್ಳಬೇಕಾಗಿದೆ.
(ಲೇಖಕ: ನಿವೃತ್ತ ಐಎಎಸ್‌ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT