ಭೂಸ್ವಾಧೀನ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿ ಅದಕ್ಕೆ ವಿವಿಧ ಪ್ರತಿಕ್ರಿಯೆ ಕಂಡು ಬಂದಿದೆ. ವಶಪಡಿಸಿಕೊಳ್ಳುವ ಜಮೀನಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ಸಿಗುತ್ತದೆ ಎಂಬ ಅಂಶ ಬೇಸಾಯದ ಬಗೆಗೆ ಬೇಸತ್ತಿರುವ ರೈತರಿಗೆ ಪ್ರಲೋಭನೆ ಉಂಟುಮಾಡಬಹುದು.
ವಿಶೇಷ ಆರ್ಥಿಕ ವಲಯಕ್ಕಾಗಿ ವಶಪಡಿಸಿಕೊಳ್ಳುವ ಪ್ರದೇಶಕ್ಕೆ ಇದು ಅನ್ವಯಿಸುವುದಿಲ್ಲ. ಆ ಕಾನೂನಿನಡಿ ತೆಗೆದುಕೊಂಡ ಕೆಲವನ್ನು ಡಿನೋಟಿಫೈ ಮಾಡಲಾಗಿದೆ. ಈ `ವಲಯ'ಗಳು (ಎಸ್ಎಜೆಡ್, ಎಇಜೆಡ್) ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆಹಾರ ಭದ್ರತಾ ಮಸೂದೆಗೆ ಹೋಲಿಸಿದರೆ, ಇವಕ್ಕೆ ಲೋಕಸಭೆಯಲ್ಲಿ ಒಪ್ಪಿಗೆ ಪಡೆಯುವಾಗ ಕಡಿಮೆ ಸಂಖ್ಯೆಯ ಸದಸ್ಯರು ಹಾಜರಿದ್ದು, ವಿಸ್ತೃತ ಚರ್ಚೆ ನಡೆಯದಿರುವುದನ್ನು ಗಮನಿಸಬೇಕು.
ರೈತರು ಜಮೀನುಗಳನ್ನು ಕೊಡಬೇಕಾಗುತ್ತದೆ ಎಂಬ ಸೂಚನೆ ದೊರೆತ ಕೂಡಲೇ ಸಾಮುದಾಯಿಕ ದೃಷ್ಟಿಕೋನದಿಂದ ಸಂಘಟಿತರಾಗಿ ದೂರಗಾಮಿ ಪರಿಣಾಮಗಳನ್ನು ವಿಶ್ಲೇಷಿಸಬೇಕು. ಶೇ 70-80 ಸಮ್ಮತಿ ಒತ್ತಡದಿಂದ ಸಾಧಿತವಾಗಬಾರದು. ಪರಿಸರ ಇಲಾಖೆಯ ಒಪ್ಪಿಗೆ ಯಾಂತ್ರಿಕ ಕ್ರಿಯೆ ಆಗಬಾರದು.