ಬೆಂಗಳೂರು: ‘ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುತ್ತಿರುವ ರಾಜಕೀಯ ನಾಯಕರು ದೇಶದ ಧಾರ್ಮಿಕ ಕೇಂದ್ರಗಳಾದ ಮಠ, ಮಸೀದಿ, ಚರ್ಚುಗಳನ್ನು ಕೂಡ ಲೆಕ್ಕ ಪರಿಶೋಧನೆ ವ್ಯಾಪ್ತಿಗೆ ತರುವಂತೆ ಒತ್ತಾಯಿಸಬೇಕು’ ಎಂದು ‘ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ’ ಅಭಿಪ್ರಾಯಪಟ್ಟಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಬಿ.ಎಂ.ಶಿವಕುಮಾರ್, ಧಾರ್ಮಿಕ ಕೇಂದ್ರಗಳಲ್ಲಿ ಲಕ್ಷಾಂತರ ಹಣ ಹರಿದಾಡುತ್ತಿವೆ. ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ. ಯಾರು ನೀಡುತ್ತಾರೆ ಎಂಬುದರ ಬಗ್ಗೆ ಪರಿಶೋಧನೆ ನಡೆಯಬೇಕು. ಒಬ್ಬ ಸಾಮಾನ್ಯ ಸರ್ಕಾರಿ ನೌಕರನೂ ಸಹ ಇಂದು ಆದಾಯ ತೆರಿಗೆ ಪಾವತಿ ಮಾಡುತ್ತಾನೆ. ಆದರೆ ಒಂದು ಕಾಲಕ್ಕೆ ಯಾವುದೇ ಆಸ್ತಿಯಿಲ್ಲದೇ ಬರಿಗೈಯಲ್ಲಿದ್ದ ಮಠಾಧೀಶರು ಇಂದು ಹೆಲಿಕಾಪ್ಟರ್ಗಳಲ್ಲಿ ಓಡಾಡುತ್ತಿದ್ದಾರೆ. ಈ ಹಣದ ಮೂಲವನ್ನು ಮಠಗಳು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಲೇಖಕ ಕೆ.ಎಸ್.ನಾಗರಾಜ್ ಮಾತನಾಡಿ, ‘ಭ್ರಷ್ಟ ಹಣ ಮಠಕ್ಕೆ ನೀಡಬೇಡಿ. ಅದನ್ನು ಸ್ವೀಕರಿಸುವುದಿಲ್ಲ’ ಎಂದು ಮಠಾಧೀಶರು ಸೂಚನಾ ಫಲಕ ಹಾಕಬೇಕು. ಅಂಥವರನ್ನು ಮಠಕ್ಕೆ ಕರೆದು ಸನ್ಮಾನಿಸಿ ಹೊಗಳುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಮಹಿಳಾ ಒಕ್ಕೂಟದ ಬೆಂಗಳೂರು ಘಟಕದ ಅಧ್ಯಕ್ಷೆ ಜಯಶ್ರೀ, ವೇದಿಕೆಯ ಸದಸ್ಯರಾದ ಆರ್.ದಯಾನಂದ, ಭೈರಪ್ಪ ಗೋಷ್ಠಿಯಲ್ಲಿದ್ದರು.