ಕುಶಾಲನಗರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ಮತದಾನದ ಮಹತ್ವ ಕುರಿತು ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಭಾರತ ಚುನಾವಣಾ ಆಯೋಗದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣ ಪಂಚಾಯಿತಿ ಕಚೇರಿಯಿಂದ ಆರಂಭವಾದ ಜಾಥಾಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿಯೂಷ್ ಡಿಸೋಜ ಚಾಲನೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸುವುದು ಅಗತ್ಯ. ಅದು ಅವನ ಹಕ್ಕು ಮತ್ತು ಕರ್ತವ್ಯ. ಆದ್ದರಿಂದ 18 ವರ್ಷ ತುಂಬಿರುವ ಪ್ರತಿಯೊಬ್ಬರು ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಧನಲಕ್ಷ್ಮಿ ಸ್ವ ಸಹಾಯ ಸಂಘ, ಮಹಿಳಾ ಸಮಾಜ, ಚೇತನ ಸ್ವ ಸಹಾಯ ಸಂಘ, ಕಲ್ಪವೃಕ್ಷ, ಛಾಯಾ, ಪಾಟಲಾಮ್ಮ, ಚಾಮುಂಡೇಶ್ವರಿ ಸ್ವಸಹಾಯ ಸಂಘಗಳ ಸದಸ್ಯರು ಸಾರ್ವಜನಿಕರಿಗೆ ಅರಿವು ಮೂಡಿಸಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು
ಪ್ರಜಾಪ್ರಭುತ್ವದ ಬಲವರ್ಧನೆಗೆ ಕಡ್ಡಾಯವಾಗಿ ಮತದಾನ ಮಾಡಿ, ಯಾವುದೇ ಆಸೆ ಆಮಿಷಗಳಿಗೆ ತುತ್ತಾಗದೇ ನಿರ್ಭೀತಿಯಿಂದ ಮತ ಚಲಾಯಿಸಿ, ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ, ಮುಕ್ತ ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಸಹಕರಿಸಿ ಎಂಬ ಘೋಷಣೆಗಳನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಜಾಥಾದಲ್ಲಿ ಪಟ್ಟಣ ಪಂಚಾಯಿತಿ ಯೋಜನಾಧಿಕಾರಿ ಶರ್ಮಿಳಾ, ಕಿರಿಯ ಎಂಜಿನಿಯರ್ ಶ್ಯಾಮ್, ಸಿಬ್ಬಂದಿ ರಾಮು, ಧನಂಜಯ, ನಂಜುಂಡ, ಕುಮಾರ್, ವಿವಿಧ ಸ್ವ ಸಹಾಯ ಸಂಘಗಳ ಮುಖಂಡರಾದ ಸುಶೀಲಾ, ಸರಳ, ನಿರ್ಮಲ ಶಿವದಾಸ್ ಪಾಲ್ಗೊಂಡಿದ್ದರು.