ಮಂಗಳೂರು: ಜಿಲ್ಲೆಯ ಅಧಿಕಾರಿಗಳ ವಿಳಂಬ ನೀತಿಯಿಂದ ಜಿಲ್ಲೆಯಲ್ಲಿ ಮರಳು ಸಾಗಣೆ ಬಂದ್ ಆಗಿದ್ದು, ಇದಕ್ಕೆ ಸಂಬಂಧಪಟ್ಟ ಇಲಾಖೆ, ಜಿಲ್ಲಾಡಳಿತ, ಸರ್ಕಾರವೇ ಹೊಣೆ ಎಂದು ಮರಳು ಸಂಘಟನೆಗಳು ದೂರಿವೆ.
ಮರಳು ಸಾಗಣಿಕೆದಾರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಮಯೂರ್ ಉಳ್ಳಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಕರ್ನಾಟಕ ಮರಳು ನೀತಿ 2011 ಜನವರಿಯಲ್ಲೇ ಪ್ರಕಟಗೊಂಡಿದ್ದರೂ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ರಚಿಸಿಲ್ಲ. ಅಕ್ಟೋಬರ್ 14ರಿಂದ ಮರಳು ಸಾಗಣೆಗೆ ಪರವಾನಗಿ ನೀಡಿಲ್ಲ. ಇದರಿಂದ ಮರಳು ವ್ಯಾಪಾರ ಬಂದ್ ಆಗಿದೆ. ಪ್ರತ್ಯೇಕ ಮಾರ್ಗಸೂಚಿ, ಶಾಶ್ವತ ಪರಿಹಾರ ದೊರಕುವ ವರೆಗೂ ಮರಳು ವ್ಯಾಪಾರ ಬಂದ್ ಮಾಡಲಾಗುವುದು ಎಂದರು.
ಲಾರಿಗಳಲ್ಲಿ ಮರಳು ಸಾಗಣೆ ಸಕ್ರಮವಿದ್ದರೂ ಲಾರಿಗಳನ್ನು ವಿನಾಕಾರಣ ನಿಲ್ಲಿಸಿ ಕಿರುಕುಳ ನೀಡಿ ದಂಡ ವಿಧಿಸಿ ದಿನಗಟ್ಟಲೆ ಠಾಣೆಯಲ್ಲೇ ನಿಲ್ಲಿಸಿ ತೊಂದರೆ ಮಾಡಲಾಗುತ್ತಿದೆ. ತಹಸೀಲ್ದಾರ್, ಹಲವಾರು ಅಧಿಕಾರಿಗಳು ನೀಡುತ್ತಿರುವ ಕಿರುಕುಳ ನಿಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಮರಳು ಸಾಗಣೆ ಬಂದ್ ಆಗಿರುವುದರಿಂದ ಕಟ್ಟಡ ಕಟ್ಟುವವರಿಗೆ ತೊಂದರೆಾಗಿದೆ. ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಅವರು ಆರೋಪಿಸಿದರು.
ಮರಳು ಸಾಗಣೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸತ್ಯಪಾಲ ರೈ ಮಾತನಾಡಿ, ಮುಂದಿನ ದಿನಗಳಲ್ಲಿ ತಾತ್ಕಾಲಿಕ ಪರವಾನಗಿ ಕೊಟ್ಟರೂ ಮರಳುಗಾರಿಕೆ ನಡೆಸುವುದಿಲ್ಲ. ನಮಗೆ ಶಾಶ್ವತ ಪರಿಹಾರ ಬೇಕು ಎಂದು ಒತ್ತಾಯಿಸಿದರು. ದ.ಕ. ಜಿಲ್ಲಾ ಹೊಯಿಗೆ ದೋಣಿ ಕಾರ್ಮಿಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಇದ್ದರು.